Friday, December 21, 2012

ಪ್ರೀತಿ ಅಂದ್ರೆ ....?


ಅವಳು  : ಪ್ರೀತಿ ಅಂದ್ರೆ ಏನು  ....?

ಅವನು  : ಹಮ್ಮ...,  ಪ್ರೀತಿ ಅಂದ್ರೆ ನೀನೆ ಕಣೆ!

ಅವಳು  : ಏ ಹೋಗು, ಹೇಳು  ಪ್ರೀತಿ ಅಂದ್ರೆ ಏನು?

ಅವನು  :  ಹೋಗ್ಲಿ ನೀನೆ ಹೇಳು ಪ್ರೀತಿ ಅಂದ್ರೆ ಏನು ಅಂತ ?

ಅವಳು : ಪ್ರೀತಿ ಅಂದ್ರೆ  ನಾನು ನಿನಗೆ ಏನು ಬೇಕಾದರೂ ಮಾಡ್ತೀನಿ  ಅದೇ ಅಲ್ವ ಪ್ರೀತಿ ಅಂದ್ರೆ ?

ಅವನು : ಹಮ್ಮ... ಆಮೇಲೆ?

ಅವಳು : ಹಮ್ಮ.. ಆ ಮೇಲೆ ನಾನು ನಿಂಗೆ ಜೀವ ಬೇಕಾದರೂ ಕೊಡ್ತಿನಿ.

ಅವನು : ನಿನ್ನ ಜೀವ ತಗಂಡು ನಾನೇನು ಮಾಡಲೇ ..?  ಹೋದ ಜೀವನ ಮೈನ್ಟೈನ್ ಮಾಡೋದು ತುಂಬಾ ಕಷ್ಟ!

ಅವಳು : ಏ ಹೋಗು   ತಮಾಷೆ ಮಾಡಬೇಡ ನೀನು .., ಸೀರಿಯಸ್  ಆಗಿ ಹೇಳ್ತಾ ಇದ್ದೀನಿ, ನಾನು ನಿಂಗೆ ನನ್ನ    ಜೀವ ಬೇಕಾದರೂ  ಕೊಡ್ತಿನಿ.

ಅವನು : ನಾನೂ ಸೀರಿಯಸ್ ಆಗೇ ಹೇಳ್ತಾ ಇರೋದು ಕಣೆ,  ಅಲ್ಲಾ  ಯಾರದ್ದೂ ಜೀವ ತಗಂಡು. ಯಾರದ್ದೋ ಜೀವ ತಗೊಂಡು ಯಾರೂ ಏನೂ ಮಾಡೋದಕ್ಕೆ ಆಗಲ್ಲ ಕಣೆ!

ಅವಳು : ಜೀವ ಬೇಡ ಅಂದ್ರೆ ಬಿಡು, ಮತ್ತೆ ನಿನಗಾಗಿ ನಾನು ಏನು ಬೇಕಾದರೂ ಮಾಡ್ತೀನಿ ಗೊತ್ತಾ?

ಅವನು : ನಿನಗೊಂದು ವಿಷ್ಯ ಗೊತ್ತ? ಯಾರೂ ಯಾರಿಗೂ ತುಂಬಾ ಒಳ್ಳೇದು ಮಾಡೋಕೆ  ಸಾದ್ಯ   ಇಲ್ಲ  ಕಣೆ?!

ಅವಳು : ಹಾಗಾದ್ರೆ ನೀನು ನನ್ನ ಪ್ರೀತಿಸಲ್ವ?

ಅವನು : ತುಂಬಾ ಪ್ರೀತಿಸ್ತಿನಿ !

ಅವಳು :  ಹೇಳೋ ಪ್ರೀತಿ ಅಂದ್ರೆ ಏನು?

ಅವನು : ನೋಡೇ ಪ್ರೀತಿ ಅಂದ್ರೆ ನಿನ್ನ ಪ್ರೀತಿಸೋದು, ನಿನ್ನ ಪ್ರೀತಿಸೋದು ಅಂದ್ರೆ ನಿನ್ನ ವ್ಯಕ್ತಿತ್ವವನ್ನು  ಪ್ರೀತಿಸೋದು!

ಅವಳು:  ...!

ಅವನು : ವ್ಯಕ್ತಿತ್ವನ್ನು ಪ್ರೀತಿಸೋದು ಅಂದ್ರೆ ನಿನ್ನ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದಾಗಿಯೂ
 ಗೌರವಿಸೋದು.

ಅವಳು : :...!

ಅವನು  : ನೀನು ಅಂದ್ರೆ ಅದೇ ಕಣೆ, ನಿನ್ನ ಅಭಿಪ್ರಾಯ, ನಿನ್ನ ವ್ಯಕ್ತಿತ್ವ, ನಿನ್ನ ಕನಸು.

ಅವಳು :....!

ಅವನು : ನಮ್ಮ ಮದುವೆಯ ಗುರಿನೋ ಅದೇ, ನಾನೂ ಬೆಳೆದು ನಿನ್ನನ್ನೂ ಬೆಳೆಸೋದು, ನನ್ನ
 ವ್ಯಕ್ತಿತ್ವ ನಿನ್ನ  ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!

ಅವಳು : ಇದು ಸಾದ್ಯನ ?


ಅವನು :  ಯಾಕಿಲ್ಲ ?  ಇನ್ನು ನೀನು ಹೇಳಿದ ಪ್ರೀತಿಯ ವಿಷ್ಯ ., ನಾನು  ನಿನಗಾಗಿ ಏನೂ ಮಾಡಬೇಕಿಲ್ಲ!
  ನೀನೂ ಕೂಡ!  ನನ್ನ  ಬೆಳಗಿನ ನಸುಕಿಗೊಂದು ನಿನ್ನ ನಗು ತುಂಬಿದ ಗುಡ್ ಮೊರ್ನಿಂಗು, ನಿನ್ನ ಹಬೆಯಾಡುವ ಕಾಫಿಗೊಂದು ನನ್ನ ಥ್ಯಾಂಕ್ಸ್,  ಹೊರಟು ನಿಂತವನಿಗೊಂದು ಸ್ನೇಹ ತುಂಬಿದ ಟಾಟಾ,  ದಣಿದು ಬಂದವನಿಗೊಂದು ನಿನ್ನ ಪ್ರೀತಿಯ ಸಾಂತ್ವಾನ, ನಿನ್ನ ಹೊಸ ಚೂಡಿದಾರಕ್ಕೊಂದು ನನ್ನ ಕಾಂಪ್ಲಿಮೆಂಟು, ನಿನ್ನ  ಉಪ್ಪಿಟ್ಟಿಗೆ ಉಪ್ಪು ಮರೆತಾಗೊಮ್ಮೆ ನನ್ನ      ಒಂದು ಹೋಗ್ಲಿ ಬಿಡು      ಮನೆಗೆ ಬೇಗ ಬರೋ ಪ್ರಾಮಿಸ್ ಮಾಡಿ ಲೇಟ್ ಆದಾಗ
 ನಿನ್ನ ಒಂದು   'ಇಟ್ಸ್ ಓಕೆ ',  ನಂಗೆ ಕೋಪ ಬಂದಾಗ ನಾನು ಪೂರ್ತಿ 420 ಅಂತ ನಿಂಗೆ ಇರೋ ನೆನಪು, ನಿಂಗೆ ಸಿಟ್ಟು ಬಂದಾಗ, ಗುಡುಗು ಸಿಡಿಲು ಆದ್ಮೇಲೆ ಪ್ರೀತಿ ಮಳೆ ಸುರಿಯುತ್ತೆ ಅನ್ನೋ  ನನ್ನ ಅರಿವು,  ಉದ್ದೇಶವೇ ಇಲ್ಲದೆ  ಆಡುವ ಹತ್ತು  ನಿಮಿಷದ ಹರಟೆ,  ಮತ್ತು ನಿನಗೆ 
ಬೇಕೆನಿಸಿದಾಗಲೆಲ್ಲ  ಸದಾ ಸಿದ್ಧವಿರುವ  ನನ್ನ ಕಿವಿ!

ಅವಳು : ಕಿವಿನ ..?

ಅವನು : ಹೌದು ಕಣೆ .., ಪಾಪ ಹೆಣ್ಣು ಜೀವಗಳು! ತಾವು ಹೇಳುವುದನ್ನು ಕೇಳಿಸಿಕೊಳ್ಳಲು 2 ಕಿವಿ ಬೇಕು ,  ಹಾಗೆ ತಾನು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳುವ ಗಂಡನ್ನನ್ನು
 ಪಡೆದ ಹೆಣ್ಣು ಜಗತ್ತಿನ ಅತ್ಯಂತ  ತೃಪ್ತಿವಂತ  ಹೆಂಡತಿ, ಹಾಗೆ ಕಿವಿ ತೆರೆದಿಟ್ಟು ಮೊಬೈಲ್ ಅಥವಾ ಲ್ಯಾಪ್ಟಾಪಿನಲ್ಲಿ  ತಲೆ ಮುಳುಗಿಸದೆ, ಕಣ್ಣಲ್ಲಿ ಕೆಟ್ಟ ನಿರ್ಲಕ್ಷ್ಯವನ್ನು  ಹೊರಗೆಡಹದೇ, ಹೇಳುವ ಮೊದಲೇ ಅದನ್ನು ಅಸಡ್ಡೆ ಎಂಬ ದೇಹ ಭಾಷೆ ತೋರಿಸದೆ, ಸ್ನೇಹ ಪೂರ್ವಕವಾಗಿ ಕೇಳಿಸಿಕೊಳ್ಳುವ ಗಂಡಸೇ ಅತ್ಯoತ ಯಶಸ್ವಿ ಗಂಡನಾಗಬಲ್ಲ!
             

ಅವಳು :  ಹಾಗಾದರೆ ಗಂಡಸಿಗೂ ಕೇಳಲು ಎರಡು ಕಿವಿ ಬೇಡ್ವ ?

ಅವನು : ಹೆಚ್ಚಿನ ಸಲ ಆತನಿಗದು ಬೇಕಾಗದು, ಆತನು ಅಷ್ಟು ಸುಲಭವಾಗಿ ತೆರೆದುಕೊಳ್ಳಲಾರ, ಮೌನದ ಚಿಪ್ಪೊಳಗೆ  ಆತನನ್ನು ಸ್ವಲ್ಪ  ಹೊತ್ತು  ಇರಗೊಟ್ಟರೆ  ಆತನಿಗೆ ಅದೇ ಸಾಂತ್ವಾನ.

ಅವಳು : ಅಷ್ಟೆನ ಪ್ರೀತಿ ಅಂದ್ರೆ ..?


ಅವನು : ಹೌದು ಕಣೆ!  ಸಂತೋಷ, ನೆಮ್ಮದಿ,  ಪ್ರೀತಿಯನ್ನು  ಇನ್ನೆಲ್ಲೋ    ಇನ್ನ್ಯಾವುದರಲ್ಲೋ ಹುಡುಕಿಕೊಂಡು   ಹೊರಟರೆ   ಅದು ಎಂದಿಗೂ ಸಿಗಲಾರದ ಮರೀಚಿಕೆ ..!    ಬದುಕಿನ  ಪ್ರತಿ ಕ್ಷಣವನ್ನು, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .., ಅದೇ ಜೀವನ ಪ್ರೀತಿ ....

   *                               *                                *               
ಕನಸು ಉದ್ದವಾಯಿತೇನೋ   ಸ್ಟೌ ಮೇಲಿಟ್ಟಿದ್ದ ಟೀ ಉಕ್ಕಿಬಂದಿತ್ತು.

ಅವನು : ಎಷ್ಟೊತ್ತೆ  ಒಂದು ಟೀ ಮಾಡೋಕೆ..?  ಆಗಿಲ್ವೇನೆ ಇನ್ನೂ!

ಅವಳು : ಆಗೋಯ್ತು ತಂದೆ ....

ಅವನು : ಥೂ ... ಸಕ್ಕರೆ ಸಾಲ,  ದಿನ ಮಾಡ್ತಿಯ ಎಷ್ಟು ಸಕ್ಕರೆ ಹಾಕ್ಬೇಕು ಗೊತ್ತಾಗಲ್ವ ..? 

ಅವಳು :............

ಅವನು : ಎಲ್ಲೇ ನನ್ನ ಸಾಕ್ಸು ?

ಅವಳು : ಈಗ ತಂದೆ ...

ಅವನು : ಥೂ ದುಡಿದು ತಂದು ಹಾಕೋದು ಮಾತ್ರ ಕಾಣತ್ತೆ, ಈ ಮನೇಲೆ ಒಂದೂ  ಬೇಕು ಅಂದಾಗ  ಸಿಗಲ್ಲಾ  ....

ಅವಳು:  : ...........

ಅವನು : ನೋಡು ನೀನು ಆ ಪೀಟೀಲು ಕೊಯ್ತಾ ಕೂತ್ಕೊಬೇಡ ಈಗ ಜಗತ್ತು ಫಾಸ್ಟ್ ಆಗಿದೆ ,
 ಪೀಟೀಲಿಗೆ ಸ್ಕೋಪೂ ಇಲ್ಲ, ಅದರಿಂದ ಪ್ರಯೋಜನನೂ ಇಲ್ಲ ಗೊತ್ತಾಯ್ತ ?   ಅದೆಲ್ಲ ಬಿಟ್ಟು ಸರಿಯಾಗಿ ಮನೆ ನೋಡ್ಕೊಂಡು ಇರು, .ಮನೇಲಿ ನೆಮ್ಮದಿನೆ ಇಲ್ಲದ ಹಾಗಾಗ್ ಬಿಟ್ಟಿದೆ!


ಅವಳು : ......

ಅವನು : ನೋಡು ಸಂಜೆ ನನ್ನ ಫ್ರೆಂಡ್ಸ್, ಕಲೀಗ್ಸ್ ಬರ್ತಾ ಇದಾರೆ , ಅವ್ರ  ಮುಂದೆ ಈ ತರಾ ಅಳುಮುಂಜಿ ಮುಖ  ಇಟ್ಕೋಬೇಡ, ನಾನು ನಗ್ತಾ ಇರ್ತೀನಿ ಸ್ವಲ್ಪ ಕೊ ಆಪರೇಟ್ ಮಾಡು. ಹೇಳಿದ್ದು ಕೆಳಸ್ತ ?

ಅವಳು : ಹಮ್ಮ ...

ಅವನು : ಇದೆ ಅನ್ಬಿಟ್ಟು  ಹನ್ನೆರಡು  ಮೊಳ  ರೇಷ್ಮೆ ಸೀರೆ ಉಟ್ಕೊಂಡು ಕೂತ್ಕೊಬೇಡ, ಸ್ವಲ್ಪ ನೀಟ್ ಆಗಿ ಡ್ರೆಸ್ ಮಾಡ್ಕೋ ಏನು?

ಅವಳು : ಹಮ್ಮ ..

ಅವನು ತಿರುಗಿಯೂ ನೋಡದೆ ದಡಾರನೆ ಬಾಗಿಲು ಎಳೆದುಕೊಂಡು ಹೋದಾಗ ಆಕೆಯ ಮನದಲ್ಲಿ
 ಮಾರ್ದನಿಸುತ್ತಿತ್ತು 

" ಬದುಕಿನ  ಚಿಕ್ಕ ಚಿಕ್ಕ ಸಂತೋಷಗಳನ್ನು  ಅನುಭವಿಸೋದೆ ಪ್ರೀತಿ .."
 

            

Tuesday, December 11, 2012

ಚಲ್ತಿ ಕಾ ನಾಮ್ ಗಾಡಿ..? ಯಾ ಜಿಂದಗಿ ..?

      
         
         
                ಒಂದು ಚಳಿಯಾದ ಬೆಳಗಿನಲ್ಲಿ ಬೆಲ್ಲ ತುಪ್ಪದೊಂದಿಗೆ   ಗರಿ ಗರಿಯಾದ ದೋಸೆಯನ್ನು ತಿನ್ನುತ್ತ ಕುಳಿತ್ತಿದ್ದಾಗ ನಾನಂದೆ  ' ಅಪ್ಪ ನಂಗೆ ಒಂದು ಸ್ಕೂಟಿ ಬೇಕು ..!'  ಅಪ್ಪಂಗೆ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಆಗಿತ್ತೋ ಏನೋ .., 'ಹಮ್ಮ ..?' ಎಂದರು ತಲೆ ಎತ್ತಿ .., ನಾನಂದೆ  ' ಹುಮ್ಮ್..  ನಂಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಬೇಕು ..!' , ಅಪ್ಪ  'ನೋಡನ '  ಅಂತಷ್ಟೇ ಹೇಳಿ  ದೋಸೆ ತಿನ್ನುವುದರಲ್ಲಿ ಮಗ್ನವಾದರು .

 
             
                  15     ದಿನ ಅದೇ ಯೋಚನೆಯಲ್ಲಿದ್ದೆ ,  ಅಪ್ಪ   'ನೋಡನ '  ಅಂದರೆ  ಅದು   'ok '  ಅಂತ  ನಂಗೆ  ಚೆನ್ನಾಗಿ  ಗೊತ್ತಿತ್ತು !  ಅಪ್ಪ ಸೆಕೆಂಡ್ ಹ್ಯಾಂಡ್ ಸ್ಕೂಟಿ ಯಾರ ಬಳಿ  ಇದೆ ಎಂದು ವಿಚಾರಿಸುತ್ತಿರಬಹುದು .., ಶೋ ರೂಂ ನಲ್ಲೂ ಸೆಕೆಂಡ್  ಹ್ಯಾಂಡ್  ಸಿಗುತ್ತಂತೆ ಅಂತ ಲೆಕ್ಕಾಚಾರ ಹಾಕುತ್ತಿತ್ತು ಮನಸ್ಸು , ನಾನಾಗ ಸಾಗರದ ಹಾಸ್ಟೆಲ್ನಲ್ಲಿ  ಇದ್ದುಕೊಂಡು ಓದುತ್ತಿದ್ದೆ , ಅಪ್ಪ ಸಾಗರಕ್ಕೆ ಬಂದವರೇ , 'ತಗಳದೆ ಆದ್ರೆ ಸೆಕೆಂಡ್ ಹ್ಯಾಂಡ್ ಯಾಕೆ..  , ಸ್ಕೂಟಿ ಪೆಪ್ ಅಂತ ಹೊಸುದು ಬಂದಿದ್ದು , ಕೋಟೆಷನ್  ನೋಡು 32೦೦೦ ಶೋ ರೂಮ್  ಪ್ರೈಸ್ ,  38೦೦೦  ಆನ್ ರೋಡ್  ಪ್ರೈಸ್ , ನಾನು ಶೋ ರೂಮ್  ನಲ್ಲಿ ಮಾತಡಿದ್ದಿ , ನಿಂಗೆ ಯಾವ ಕಲರ್ ಬೇಕು ಅಂತ ಸೆಲೆಕ್ಟ್ ಮಾಡು' ಅಂತ ಕೈಗೆ  ಕೋಟೆಷನ್ ಕೊಟ್ಟೆ ಬಿಡೋದಾ !  ಪಕ್ಕದಲ್ಲೇ ಬಾಂಬ್ ಬಿದ್ದ ಹಾಗಾಗುವ ಸರದಿ ನನ್ನದಾಗಿತ್ತು !. 10  ಸಾವಿರಕ್ಕೋ , 15  ಸಾವಿರಕ್ಕೋ   ಸಿಗುವ ಸೆಕೆಂಡ್  ಹ್ಯಾಂಡ್ ಸ್ಕೂಟಿ ತೆಗೆದುಕೊಳ್ಳುವ  ಯೋಚನೆಯಿತ್ತೆ ಹೊರತು  ಹೊಸ ಸ್ಕೂಟಿ ಬಗ್ಗೆ ಯೋಚಿಸಿಯೂ ಇರಲ್ಲಿಲ್ಲ ..! ಸರಿ ಶೋ ರೂಂ  ಗೆ ಹೋಗಿ  ಕಲರ್  ಎಲ್ಲ ನೋಡಿ ಕೆಂಪು ಬಣ್ಣದ್ದು ಸೆಲೆಕ್ಟ್ ಮಾಡಿ ಹಾಸ್ಟೆಲ್ ಗೆ ಬಂದರೂ ಮನಸ್ಸು ಪೂರ್ತಿಯಾಗಿ ಖುಷಿ ಪಡದೆ ಇನ್ಸ್ಟಾಲ್ ಮೆಂಟ್  ನಲ್ಲಿ ಖುಷಿಯನ್ನು ಆಸ್ವಾದಿಸುತ್ತಿತ್ತು .









   
                 ಕೊನೆಗೂ ಪ್ರೊಸೀಜರ್ ಎಲ್ಲ ಮುಗಿದು ಅದೇ ಶೋ ರೂಮ್  ನಲ್ಲಿ ಉದುಬತ್ತಿ ಹಚ್ಚಿ ಗಣಪತಿ ಪೂಜೆಯನ್ನೂ ಮಾಡಿ ಸ್ಕೂಟಿ ಕೀ  ನನ್ನ ಕೈಗೆ ಬಂದು ಸ್ಕೂಟಿ ಹತ್ತಿ ಕೂತು  ಹೋಗ್ತಾ ಇದ್ರೆ ಆಕಾಶದಲ್ಲೇ ಸ್ಕೂಟಿ ಹೊಡೆದ ಅನುಬವ !   ಆಕಾಶವೇ ಅಂಗೈಯಲ್ಲಿ  ಸಿಕ್ಕಿದಷ್ಟು ಆನಂದ ! ನನ್ನ ಸ್ಕೂಟಿ , ನನ್ನ ಹೆಸರಲ್ಲೇ ರಿಜಿಸ್ಟ್ರೇಷನ್  ! ಹಮ್ಮ .. ಅವತ್ತಿನಿಂದ ಇವತ್ತಿನವರೆಗೂ ಪ್ರತೀ ಸಲ ನನ್ನ ಪ್ರೀತಿಯ ಸ್ಕೂಟಿ  ನೋಡಿದಾಗಲೂ  ಮನಸಿನ ಯಾವೊದೋ ಮೂಲೆಯಲ್ಲಿ ಒಂದು  ಖುಷಿಯ ಪಲಕು! ಗಣಪತಿ ಕೆರೆಯ ಬಳಿಯ ಹಾಸ್ಟೆಲ್ನಿಂದ ಸ್ಕೂಟಿ ಹೊರಟರೆ BH  ರೋಡ್ ದಾಟಿ ಇಕ್ಕೇರಿ ರೋಡಲ್ಲಿ ಇರುವ ನನ್ನ ಕಾಲೇಜು     ತಲಪಲು ೧೦ ನಿಮಿಷ !  ವಾವ್  ..! ಸ್ವಲ್ಪ ದಿನ ಸಮಯವೇ ನನ್ನ ಕೈಲಿದ್ದಷ್ಟು ಖುಷಿ ನನಗೆ !

             
                  ಹಾಸ್ಟೆಲ್ ಎದುರಿಗೆ ಇದ್ದ ನೀರಿನ ಟ್ಯಾಂಕ್ ನಲ್ಲಿ ನನ್ ಸ್ಚೂಟಿಗೆ ದಿನ ಬಿಟ್ಟು ದಿನ ಸ್ನಾನ , ಮಿರ ಮಿರ ಮಿಂಚುವಂತೆ ದಿನ ಬಟ್ಟೆಯಿಂದ್ ಒರೆಸುವಷ್ಟು ಉಪಚಾರ !   ಪೆಟ್ರೋಲ್ ಪ್ರೈಸ್   ಒಂದು ಲೀಟರ್ ಗೆ Rs  42 ಇತ್ತು ಅವಾಗ , ಅಪ್ಪ ಅಷ್ಟೊಂದು  ಸ್ಟ್ರಿಕ್ಟ್ ಆಗಿ ಏನೂ  ಹೇಳದ್ದಿದ್ದರೂ ಅದೇನೋ ಗೊತ್ತಿಲ್ಲ ನಂಗೆ ನಾನೇ ಕೆಲವು ನಿಯಮವನ್ನು  ಹಾಕಿಕೊಂಡುಬಿಟ್ಟಿದ್ದೆ , ತಿಂಗಳಿಗೆ ಇಂತಿಷ್ಟೇ ಪೆಟ್ರೋಲ್ ಹಾಕ್ಬೇಕು , ಸುಮ್ಸುಮ್ನೆ ಎಲ್ಲೆಂದರಲ್ಲಿ ಸುತ್ತಬಾರದು , ಅನಾವಶ್ಯಕವಾಗಿ ಸ್ಕೂಟಿ ಹೊಡಿಬಾರದು,  ಸ್ಕೂಟಿ ನ  ತುಂಬಾ ಚೆನ್ನಾಗಿ ಮೈಂಟೈನ್ ಮಾಡ್ಬೇಕು  etc ... etc..ಹಮ್ಮ ..  ಕಾಲೇಜು ಬಿಟ್ಟರೆ ನನ್ನ ಸ್ಕೂಟಿಗೆ ಸಾಗರದಲ್ಲಿರುವ ಪ್ರತಿ ಲೈಬ್ರರಿಯೂ  ಚಿರಪರಿಚಿತ ! ನಾನು ಬಯಸಿದಾಗಲೆಲ್ಲ ಕ್ಷಣ ಮಾತ್ರದಲ್ಲಿ ನನ್ನನ್ನು ಲೈಬ್ರರಿಯ  ಎದುರಿಗೆ ತಂದು ನಿಲ್ಲಿಸುತ್ತಿತ್ತು

                ಫೈನಲ್ ಸೆಮ್ ನಲ್ಲೆ ಮದುವೆ  ಫಿಕ್ಸ್ , ಹಾಸ್ಟೆಲ್ ನಲ್ಲಿ  ಎಲ್ರೂ ಅಂತಿದ್ರು , " ಚೈತ್ರನಿಗೆ ಹೊಸ ಗಂಡ ಸಿಕ್ಕದ  ಅಂತ ಹಳೆ ಗಂಡನ  ಬಗ್ಗೆ ಅಸ್ಥೆ ಕಡಿಮೆ ಆಯಿತು ",.  ಅದೇನೋ ಮದುವೆಗೆ ಸಮಯ ತುಂಬಾ ಕಡಿಮೆ ಇದ್ದಿದ್ರಿಂದ ಶಾಪಿಂಗ್..  ಸ್ಟಿಚ್ಚಿಂಗು..  ಅದು.. ಇದು.. ಅಂತ ನನ್ನ ಪ್ರೀತಿಯ ಸ್ಕೂಟಿ ಕಡೆ ಗಮನವೇ ಕೊಡೋದಕ್ಕೆ ಆಗ್ತಾ ಇರ್ಲಿಲ್ಲ .., ಪಾಪ ಅದಕ್ಕೆ ಬೇಜಾರಾಗಿತ್ತೋ ಏನೋ  ...





               ಬೆಂಗಳೂರಿಗೆ  ನನ್ನೊಂದಿಗೆ ಬಂದ ನನ್ನ ಸ್ಕೂಟಿ ನಾನೇ ಆಶ್ಚರ್ಯ ಪಡುವಷ್ಟು ಬೇಗನೆ ಇಲ್ಲಿನ ಸಿಗ್ನಲ್ಲು ಟ್ರಾಫಿಕ್  ಗೆ  ಒಗ್ಗಿಕೊಂಡಿತು , ಆದರೆ ಪಾಪ ಬೆಂಗಳೂರಿನ ೨೫ ರೋಡ್ಗಳು ಅದಕ್ಕೆ ಸದಾ ಗೊಂದಲ ! ಯಾವ ಕಡೆ ಹೋಗೋದು ಅಂತ ದಿಕ್ಕೇ ತೋಚದ ಸ್ತಿತಿ , ಒಮ್ಮೆ ನೋಡಿದ ರೋಡು ಮತ್ತೊಮ್ಮೆ ನೋಡುವಾಗ ಚೇಂಜು ! ಪಾಪ ನನ್ನ ಸ್ಕೂಟಿ ಏನು ಮಾಡಲು ಸಾದ್ಯ ? ಈಗ್ಲೂ ಅಷ್ಟೇ ಎರಡು ಮೂರು  ಕವಲುಗಳ  ದಾರಿಯಲ್ಲಿ  ' I Cant '  ಅಂತ ಒಮ್ಮೊಮ್ಮೆ  ಮುಷ್ಕರ ಹೂಡಿಬಿಡುತ್ತದೆ ..!

              ಮಗಳನ್ನು ಸ್ಕೂಲ್ನಿಂದ ಪಿಕ್ ಮಾಡೋದು,    ತರಕಾರಿ ತರೋದು,    ಚಿಕ್ಕ ಪುಟ್ಟ ಶಾಪಿಂಗು  , ಗೆಳತಿಯರೊಡನೆ ಓಡಾಟ,  ಅದು ಇದು ಸಣ್ಣ ಪುಟ್ಟ ಕೆಲಸ ..ಎಲ್ಲವನ್ನೂ ನನ್ನ ಸ್ಕೂಟಿ ಸ್ವಲ್ಪವೂ ಬೇಜಾರಿಲ್ಲದೆ ಮಾಡುತ್ತಿದೆ ..,   ಏನೇ ಆದರೂ 10   ವರುಷದಿಂದ ಇವತ್ತಿನವರೆಗೂ ನನ್ನ ಜೊತೇನೆ ಇತ್ತು , ನನ್ನ  ಜೊತೇನೆ ಇದೆ .,  ಮುಂದೇನೂ ಇ..ರ...ತ್ತೆ ...


       
                 ಇಷ್ಟರ ಮದ್ಯೆ  ಪ್ರೀತಿಯ ಸ್ಕೂಟಿ  ನನ್ನ ತಂಗಿ ನನ್ನ ತಮ್ಮನನ್ನು ಹೊತ್ತುಕೊಂಡು ತಿರುಗಾಡಿತ್ತು .  ಕಾಲೇಜು, ಎಗ್ಸಾಮ್,  ಎಂಗೇಜ್ಮೆಂಟ್ ,  ಮದುವೆ , ಆ ಮನೆ, ಈ ಮನೆ , ಬೆಂಗಳೂರು , ಆ ನಗರ , ಈ ನಗರ , ಮತ್ತೊಂದು  ಮನೆ ,  ಮಗಳು .. ಅವಳ ಸ್ಕೂಲ್ .. ಅಬ್ಬಬ್ಬ ..!!!  ಹತ್ತು ವರುಷದಲ್ಲಿ ಏನೆಲ್ಲಾ ...!! ಇನ್ನೆಷ್ಟು  ಘಟ್ಟ , ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತೋ ನನ್ನ ಪ್ರೀತಿಯ ಸ್ಕೂಟಿ ಗೊತ್ತಿಲ್ಲ ..!  ಲವ್ ಯು ಸ್ಕೂಟಿ ..!

 

Monday, December 3, 2012

ಬದುಕ ಮನ್ನಿಸು ಮನವೇ

   
ಬದುಕ ಮನ್ನಿಸು ಮನವೇ...

ಸಮಸ್ಯೆಯಾದರೆ  ಪರಿಹರಿಸಿಕೊಳ್ಳಬಹುದು , ದುಃಖವಾದರೆ ಇಂತಿಷ್ಟು ಕಾಲ ಅಂತಿರುತ್ತದೆ, ನಂತರ ಅದರ ತೀವ್ರತೆ ಕಡಿಮೆಯಾಗಿ ಮರೆತುಬಿಡಬಹುದು. ಬದುಕು ಎಂಬ ಇಡೀ ಪ್ಯಾಕೇಜ್ ನಲ್ಲಿ  'ಒಂದು ಸಮಸ್ಯೆಯ'  ಆಯುಷ್ಯ  ತುಂಬಾ ಚಿಕ್ಕದು. ಏನೇ ಆದರೂ ಬದುಕು ಹಾಗೆ ಸಾಗುತ್ತಿರುತ್ತದೆ. ಆದರೆ ಕೆಲವೇ ಕೆಲವು  ಸಂಗತಿಗಳು ಮಾತ್ರ  ಪ್ರತಿಕ್ಷಣದ ಬದುಕನ್ನೂ  ಸವಾಲಿಗೊಡ್ದುವಂತದ್ದು .

               
 ಹೇಳಲು ಹೊರಟಿರುವುದು ಬುದ್ದಿಮಾಂದ್ಯ ಅಂತ ಇರುತ್ತಾರಲ್ಲ ಅಂತ ಮಕ್ಕಳ ಬಗ್ಗೆ, ಅವರ ತಂದೆ ತಾಯಿಯರ ಬಗ್ಗೆ,  ಅಂತವರಿಗೆ ಜೀವನದ ಪ್ರತಿ ಕ್ಷಣವೂ ಹೊರಾಟ, ಪ್ರತಿ ಹೆಜ್ಜೆಯೂ ಸವಾಲು , ಪ್ರತಿ ನಗುವಿನ ಹಿಂದೊಂದು ನೋವಿನ ಸೆಲೆಯನ್ನು ಎದುರಿಗೆ ಬಾರದಂತೆ ತಡೆದು ನಿಲ್ಲಿಸಿಕೊಂಡಿರುತ್ತಾರೆ.  ಅದು ನಮ್ಮ ನಿಮ್ಮ ದುಃಖಗಳ  ಹಾಗೆ ಇವತ್ತಿದ್ದು ನಾಳೆ ಹೊರಟುಬಿಡುವಂತದ್ದಲ್ಲ , ಯಾರೋ ಸಾವಿನಲ್ಲಿ ಆಗಲಿದ ದುಃಖ ಕೂಡ ಒಂದು ಕಾಲದ ಮಿತಿಯಲ್ಲಷ್ಟೇ  ನಮ್ಮನ್ನು ನರಳಿಸಬಹುದು. ಇದು ಹಾಗೂ ಅಲ್ಲ.



ಮೊನ್ನೆ ಯಾವೊದೋ ಕಾರಣಕ್ಕಾಗಿ ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ,  ವಿಸಿಟರ್ಸ್ ಸೀಟ್ ನಲ್ಲಿ ಕುಳಿತ 5 ನಿಮಿಷಕ್ಕೆ ನನ್ನ ಎದುರಿಗೆ ಒಬ್ಬ ತಾಯಿ ಮಗಳು ಬಂದು ಕುಳಿತರು. ಮಗಳು ವಿಚಿತ್ರವಾಗಿ ಶಬ್ದ ಹೊರಳಿಸುತ್ತ  ಏನೋ  ಹೇಳಲು ಪ್ರಯತ್ನಿಸುತ್ತಿದ್ದಳು ಆಕೆಗೆ ತನ್ನ ನಾಲಿಗೆ  ತುಟಿ ಅಂಗಾಂಗಗಳ ಮೇಲೆ ಎಚ್ಚರವಿರಲಿಲ್ಲ, ಅವರಮ್ಮ ಆಕೆಯನ್ನು ಸಂಬಾಳಿಸುವುದರಲ್ಲಿ  ಸೋಲುತ್ತಿದ್ದರು.  ಅವರ ಮುಖದಲ್ಲಿದ್ದ ಆ ನೋವು, ಮುಜುಗರ, ಆಳವಾದ ಕಣ್ಣಲ್ಲಿದ್ದ ಅತಿಯಾದ ನೋವು...,  ನನಗೆ ಇಂಥ ದೃಶ್ಯಗಳನ್ನು ನೋಡಲು ಮನಸು ಸಹಕರಿಸದು.., ಗಂಟಲುಬ್ಬಿ ಕಣ್ಣು ತುಂಬಿ ಬಂತು. ಟಿಪಾಯಿ ಮೇಲಿದ್ದ ನ್ಯೂಸ್ ಪೇಪರ್ ಮುಖಕ್ಕೆ ಅಡ್ಡ ಹಿಡಿದೆ. ಸುಮ್ಮನೆ  ಯೋಚಿಸಿದೆ.. ನಮ್ಮ ಚಿಕ್ಕ ಪುಟ್ಟ ಸಮಸ್ಯೆಗಳ ಸುತ್ತವೇ ನಮ್ಮ ಮನಸು ಸುತ್ತುತ್ತಿದ್ದರೆ...., ಅವರ ಮನಸು ಹೇಗಿರಬಹುದು..!  ಸೀರೆ, ಮನೆ ಅದು, ಇದು   ಅಂತ ಯೋಚಿಸುತ್ತಿದ್ದರೆ ಆಕೆಯ ಪ್ರಿಯರಿಟಿ ಏನಿರಬಹುದು ??  ನಮ್ಮ ಮಗ, ಮಗಳು  A ಗ್ರೇಡ್ ಬಂದಿಲ್ಲವಲ್ಲ ಅಂತ ಚಿಂತಿಸುತ್ತಿದ್ದರೆ ಆಕೆ ಏನು ಚಿಂತಿಸುತ್ತಿರಬಹುದು ? ಮತ್ತೂ ಎಂದರೆ ಇಂತ ವಿಷಯಗಳಲ್ಲಿ ತಾಯಿಯನ್ನು ಕಾಡುವ ಮತ್ತೊದು ಯೋಚನೆ... ಮಗು ಹೆಣ್ನಾಗಿದ್ದರೆ ಪ್ರಕೃತಿ ಕೊಡಮಾಡುವ ಅನೇಕ  ಘಟ್ಟಗಳು..!  'ನಾನು ಇರುವ ತನಕ ನೋಡಿಕೊಳ್ಳಬಲ್ಲೆ ಮುಂದೇನು?' ಎನ್ನುವ ವಿಚಾರವೊಂದು ಆಕೆಯ ಸುತ್ತ ಗಿರಾಕಿ ಹೊಡೆಯುತ್ತಿರುತ್ತದೆ.  ಮನಸ್ಸು ಭಾರವಾಗಿತ್ತು. ನಾವು ಯಾವು ಯಾವುದೋ ವಿಷಯಗಳಿಗೆ ದುಃಖಿಸುತ್ತೆವಲ್ಲ ಅಂತ ಆ ಕ್ಷಣಕ್ಕೆ  ಅನಿಸಿಬಿಟ್ಟಿತು ನನಗೆ.

ಮನೆಗೆ ಬಂದವಳೇ ಗೂಗಲ್ ಒಳಗೆ ಹೋಗಿ ಕುಳಿತುಕೊಂಡೆ ..,  ಈ ತರದ ಮಕ್ಕಳ ಬಗ್ಗೆ ಸಾಕಷ್ಟು ಓದಿದೆ, ಓದುತ್ತಿದ್ದ ಹಾಗೆ ಸ್ವಲ್ಪ ಸಮದಾನವಾದ ಹಾಗಾಯಿತು , ಕೆಲವನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ...?  ಅದರ ಜೊತೆಗೆ ಬದುಕನ್ನು ಅಭ್ಯಸಿಸಿಕೊಳ್ಳಬೇಕು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅರುಣಶೌರಿಯವರು ನಿಮಗೆ ಗೊತ್ತಿರಬಹುದು,  ಅವರಿಗೆ ಒಬ್ಬ ಮಗನಿದ್ದಾನೆ.., ಅವನ ಬಗ್ಗೆ ಶೌರಿಯಯವರು ಏನೆನ್ನುತ್ತಾರೆ ಗೊತ್ತಾ..? " ನನಗೆ ನನ್ನ ಮಗ ಕೊಡುವ ಕಾನ್ಫಿಡೆನ್ಸ್ ತುಂಬಾ ದೊಡ್ಡದು, ಏಕೆಂದರೆ ಅವನು ನಾನು  ಎದ್ದಾಗಲೂ  ಬಿದ್ದಾಗಲೂ ನನ್ನನ್ನು ಒಂದೇ ತರಾ ನೋಡುತ್ತಾನೆ ",  ಎನ್ನುತ್ತಾರೆ , ವಿಷಯ ಅಂದರೆ..  ಅವರ ಮಗ   ಮೆಂಟಲಿ ಚಾಲೆಂಜ್ಡ್ ! . ಇನ್ನೊಬ್ಬ ತಂದೆಗೆ 2 ಗಂಡುಮಕ್ಕಳು.., ಒಬ್ಬ ಬುದ್ದಿಮಾಂದ್ಯ , ಇನ್ನೊಬ್ಬ ಅತಿ ಬುದ್ದಿವಂತ , ಅವನೇನು ಅನ್ನುತ್ತಾನೆ ಅಂದರೆ, " ನಂಗೆ  ಇಬ್ಬರೂ ಮಕ್ಕಳು ಸಮಾನರು ಇವನು ಚಿನ್ನದ ಪದಕ ತಂದಾಗ ಆಗುವಷ್ಟೇ ಸಂತೋಷ ಆತ  ತನ್ನ ಶೂ ಲ್ಯೇಸ್ ನ್ನು ತಾನೇ ಕಟ್ಟಿಕೊಂಡಾಗ ಅನುಬವಿಸುತ್ತೇನೆ" ಎನ್ನುತ್ತಾನೆ. ಇಂತಹ ಅನೇಕ ಉದಾಹರಣೆ ಓದಿದಾಗ ಮನಸು ಸ್ವಲ್ಪ ತಹಬದಿಗೆ ಬಂದಿತ್ತು.


ಮೊದಲು  ಸಮಾಜ ಅಂತವರನ್ನು ಯಾವುದೇ ಕಾರಣಕ್ಕೂ ಕರುಣೆಯ ದೃಷ್ಟಿಯಿಂದ ನೋಡಬಾರದು, ಸಹಜತೆ ಇರಬೇಕು ನಡೆ ನುಡಿ  ನೋಟದಲ್ಲಿ , ಇನ್ನೂ ಎಂದರೆ ಪರೀಕ್ಷೆಯಲ್ಲಿ ನಮಗಿಂತ ಜಾಸ್ತಿ ಅಂಕ ತೆಗೆದುಕೊಂಡವರೆಡೆಗೊಂದು  ನಮಗೆ ಗೌರವ ಇರುತ್ತಲ್ಲ ಅಂತದೊಂದು ಗೌರವವಿರಬೇಕು ಅವರ ಪಾಲಕರೆಡೆಗೆ , ಏಕೆಂದರೆ ಬದುಕನ್ನು ಅವರು ನಮಗಿಂತ ತೀವ್ರವಾಗಿ, ಆಳವಾಗಿ ಅನುಭವಿಸುವವರು.  ನಾನೂ ಅಂತವರಿಗೆ ಮುಂದೊಂದು ದಿನ ಏನಾದರೂ ಮಾಡಬೇಕು ಅನಿಸಿದ್ದಂತೂ ನಿಜ.

ಕಡೇ ಪಕ್ಷ.....

  ಸಮಸ್ಯೆಗಳು, ನೋವು,  ದುಃಖ  ಇವುಗಳಿಂದ ಹೊರತಾಗಿರಲಂತೂ ಸಾದ್ಯವಿಲ್ಲದೆ ಇರಬಹುದು....,  ಅಟ್ಲೀಸ್ಟ್ ದುಃಖ  ಪಡುವಷ್ಟು ಆ ದುಃಖ  'ವರ್ತ್' ಆಗಿರಲಿ...,  ಪಟ್ಟ ಪ್ರತಿ ದುಃಖವೂ ಅನುಭವವಾಗಿ ಮನಸ್ಸು ಇನ್ನೂ ಪಕ್ವವಾಗಲಿ...,   ಆಗದ, ಹೋಗದ,  ಇಲ್ಲದ, ಸಲ್ಲದ, ಬೇಡದ  ವಿಷಯಗಳಿಗೆ ಕೊರಗುವುದನ್ನು ದುಃಖಿಸುವುದನ್ನು ನಮ್ಮ  ಮನಸು ಮೊದಲು ನಿಲ್ಲಿಸಲಿ. ದುಃಖ ನೋವುಗಳಲ್ಲಿಯೂ ನಮ್ಮ ಮನಸ್ಸು  ಚೂಸಿಯಾಗಿರಲಿ. ಸದ್ಯಕ್ಕೆ ಇಷ್ಟಾದರೂ ಮಾಡೋಣ ಅನ್ನಿಸಿತು.

ಕೊನೆಯಲ್ಲಿ,

ಭಗವಧ್ಗೀತೆಯಲ್ಲಿ ಹೇಳಿದ ಹಾಗೆ , ' ಬದಲಾಯಿಸಬಲ್ಲದ್ದನ್ನು ಬದಲಾಯಿಸವ ಶಕ್ತಿ ಇರಲಿ, ಬದಲಾಯಿಸಲು ಸಾದ್ಯವಿಲ್ಲದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಲಿ '  ಅಲ್ಲವೇ ...

        
               





               


     
                     .

               


               
         

       

     

           

   

Saturday, November 24, 2012

ಸ್ವಲ್ಪ ನಿಜಾ ... ಸ್ವಲ್ಪ ಮಜಾ.. ಕಣ್ರೀ ...


ಒಂದೇ  ವ್ಯಕ್ತಿ  ಒಂದೇ  ವಿಷಯವನ್ನು,  ಬೇರೆ ಬೇರೆ ದ್ರಷ್ಟಿಕೋನದಿಂದ  ನೋಡಲು ಸಾದ್ಯಾನ ?
 ಹಾಗಂದ್ರೇನು ? ನೋಡೋಣ ಬನ್ನಿ .....!

  ಶಾರದಮ್ಮ :-       ಏನ್ರಿ ಗಿರಿಜಮ್ಮ  ಚೆನ್ನಾಗಿದ್ದೀರ ?
ಗಿರಿಜಮ್ಮ :-            ಏನ್ ಚೆಂದ ಬಂತುರೀ .. ಏನೋ ಇದೀನಿ ..

 ಶಾರದಮ್ಮ  :-         ಯಾಕ್ರೀ ಹಾಗಂತೀರಾ ...ಹೊಸ  ಸೊಸೆ ಬಂದಿದಾಳೆ .... ಏನ್ ಕತೆ?  ಹೇಗಿರಬೇಕು ನೀವು ..?
 ಗಿರಿಜಮ್ಮ :-            ಅಯ್ಯೋ   ಬಿಡ್ರಿ  ಅದೇನ್ ಕೇಳ್ತೀರಾ ..., ಹೆಸರಿಗೆ ಸೊಸೆ ಕಣ್ರೀ ಎಲ್ಲ ಕೆಲಸಾನೂ ನಾನೇ ಮಾಡಬೇಕು

 ಶಾರದಮ್ಮ  :-        ಅಯ್ಯೋ  ಹೌದೇನ್ರಿ ..?
ಗಿರಿಜಮ್ಮ :-             ಹೌದು ಕಣ್ರೀ , ಅದೇನ್ ಅವ್ರ ಅಪ್ಪ ಅಮ್ಮ ಏನೂ ಕಲ್ಸಿಕೊಟ್ಟಿಲ್ಲ ಕಣ್ರೀ ..., ಹುಡುಗಿ ಹಾಗೆ                                                    .ಓಡಾಡ್ಕೊಂಡು ಇರತ್ತೆ , ಎಲ್ಲದಕ್ಕೂ ನಾನೇ ಸಾಯಿಬೆಕೂ ..., ನಮ್  ಕಾಲದಲ್ಲಿ ಹಿಗಿತ್ತೆನ್ರೀ                      ಕೆಲಸಕಾರ್ಯ ಹಾಡು    ಹಸೆ  ಎಲ್ಲ  ಬರ್ಬೇಕಿತ್ತು  ಅಲ್ವೇನ್ರೀ ..                    
                        
ಶಾರದಮ್ಮ  :-         ಹೌದ್ರೀ....
 ಗಿರಿಜಮ್ಮ :-          ಅಲ್ಲಾ ... ಅತ್ತೆ ಅಂದ್ರೆ ಏನ್ ಗೌರವ .. ಮರ್ಯಾದೆ ,  ನನ್ನ ಸೊಸೆಗೆ ನನ್  ಕಂಡ್ರೆ ಒಂಚೂರೂ ಗೌರವನೆ
                            ಇಲ್ಲಾರೀ ..
  ಶಾರದಮ್ಮ    :-    ಹೌದೇನ್ರೀ .....?

 ಗಿರಿಜಮ್ಮ :-           ಹುನ್  ರೀ  ಅದೇನು ಬಟ್ಟೆ ..ಏನು ಪ್ಯಾಷನ್ನು , ಅಲ್ಲಾರೀ  ಕೂದಲನ್ನು  ಉದ್ದ ಗಿಡ್ಡ ಕತ್ತರಿಸಿಕೊಳ್ಳೋದು
                           ಯಾವ್  ಪ್ಯಾಶನರೀ ...., ಚೀ .., ಆ  ವೇಷ  ನೋಡಕ್ಕಾಗಲ್ಲರೀ ....

 ಶಾರದಮ್ಮ  :-     ನಿಮ್  ಮಗ  ಏನೂ  ಅನ್ನಲ್ವೇನ್ರೀ .....
 ಗಿರಿಜಮ್ಮ    :-     ಇಲ್ಲಾ  ಕಣ್ರೀ ..,ಅವ್ನು  ಹೆಂಡ್ತಿ ಹೇಳಿದಾಗೆ  ಕುಣಿತಾನೆ  ಕಣ್ರೀ ...,
-                          ಚಿಕ್ಕವನಿದ್ದಾಗ   ನಾನ್  ಹೇಳಿದ್ದ  ಮಾತೆ ಕೇಳ್ತಾ ಇದ್ದ ..., ಈಗ ನೋಡ್ರೀ
                            ಕಾಲ  ಕೆಟ್ಟಬಿಡ್ತು  ಕಣ್ರೀ ......

ಶಾರದಮ್ಮ    :-        ಹಮ್ಮ್ ....ಅಂದ  ಹಾಗೇ ನಿಮ್  ಮಗಳು ಇವತ್ತು ಬರ್ತಾಳೆ ಅಲ್ವೇನ್ರೀ ...., ಅವ್ಳಿಗೆ  ಈ
                              ಹೂ   ಕೊಟ್ಟಬಿಡ್ರೀ ...
ಗಿರಿಜಮ್ಮ :-           ಅಯ್ಯೋ   .. ನಮ್  ಮಗುಗಾ ..?  ಅವ್ಳಿದ್ದು ಬಾಬ್    ಕಣ್ರೀ    .ಅವ್ಳು   ಹೂವು  ಗೀವು                                                       ಮುಡ್ಕೊಳಲ್ಲ .  ಪಾಪ .., ಈಗಿನ್ ಕಾಲದ ಹುಡುಗ್ರು ನೋಡಿ ....


                           .
ಶಾರದಮ್ಮ               ಅದೂ  ಹೌದು  ಬಿಡಿ ..., ಹೇಗೂ ನಿಮ್ ಮಗಳು ಬರ್ತಿದಾಳೆ , ನಾಳೆ ನಿಮ್ ಅಡಿಗೆಗೆ
                                          ಒಂದಿಷ್ಟು          ಸಹಾಯವಾಗುತ್ತೆ ....
                       
ಗಿರಿಜಮ್ಮ :-         ಅಯ್ಯೋ .... ಪಾಪ  ಆ ಮಗು ಏನ್ ಮಾಡತ್ತೆ ...?  ಅದಕೊಂದು ಕಾಪಿ  ಮಾಡೋಕೂ ಬರಲ್ಲಾರೀ  ....
                            ಓದೋ  ಮಗುಗೆ ಯಾಕ ತೊಂದ್ರೆ ಅಂತ  ಅದನ್ನೆಲ್ಲ  ನಾನೇ ಮಾಡ್ತಾ ಇದ್ದೇರೀ , ಈಗ್ಲೂ ಅಷ್ಟೇ 
                            ಮಗು ಕೆಲಸಕ್ಕೆ  ಹೋಗ್ಬರೋಷ್ಟರಲ್ಲಿ ಸುಸ್ತ್ಹಾಗಿರತ್ತೆ  ಅಂತ ಎಲ್ಲ ಅವರತ್ತೇನೆ ಮಾಡ್ತಾರೆ ...

ಶಾರದಮ್ಮ  :-          ಅದೂ  ಸರಿ ಬಿಡಿ..ನಾಳೆ ನಿಮ್ಮ ಅಳಿಯನೂ ಬರ್ತಾ ಇದಾನೆನ್ರಿ ?
 ಗಿರಿಜಮ್ಮ :-  ಹೌದ್ರೀ .., ಎಂತ ಒಳ್ಳೆ ಅಳಿಯ ಅಂತೀರಿ! ನಮ್  ಮಗಳ ಯಾವ ಮಾತಿಗೂ ಇಲ್ಲ ಅನ್ನಲ್ಲಾರೀ ...., ಇಬ್ರೂ
                    ಎಷ್ಟು ಚೆನ್ನಾಗಿ ಹೊಂದುಕೊಂಡು ಇದಾರೆರೀ ...

ಶಾರದಮ್ಮ  :- ಒಳ್ಳೇದು ಬಿಡ್ರೀ .., ಬರ್ತೀನ್ರೀ .........


ಇದು  ಅತ್ತೆಯಂದಿರಿಗೆ ಮಾತ್ರ ಸೀಮಿತ ಅಲ್ಲ .., ನಿರೂಪಿಸಲು  ವಿನೋದಾಥ್ಮಕ  ಎಳೆ ಅಷ್ಟೇ ...,
ಒಂದೇ ಸಂಗತಿಯಲ್ಲಿನ  ವಿಭಿನ್ನ ದೃಷ್ಟಿಕೋನಕ್ಕೆ .. ಮತ್ತೊಂದಿಷ್ಟು  ವಿಷಯಗಳು:-

                 ##                                                                          ##

ಹುಡುಗಿ ತುಂಬಾ ಚೆಲ್ಲು ..                                                    ಹುಡುಗಿ  ಸೋಶಿಯಲ್

 ಮಾತು ಕಡಿಮೆ, ಜಂಬ                                                       ಹುಡುಗಿ ಗಂಬೀರ

 ತುಂಬಾ ನಿದಾನಿ                                                                ತುಂಬಾ ಸಮಾದಾನಿ

ಆಕೆಗೆ ಗಡಿಬಿಡಿ                                                                      ತುಂಬಾ ಚುರುಕು

ಓದೋದು ಬಿಟ್ಟು ಬೇರೆ ಪ್ರಪಂಚಾನೇ ಗೊತ್ತಿಲ್ಲ                              ಓದಲು ತುಂಬಾ ಜಾಣೆ

ಆತ  ನಿಷ್ಟುರಿ                                                                          ಆತ  ತುಂಬಾ ನೇರ


ಕೊರೆತ .., ಮಾತು ಜಾಸ್ತಿ                                                          ಒಳ್ಳೆ ವಾಗ್ಮಿ


      ಸಹಜ  ಅನ್ಸತ್ತೆ ಅಲ್ವ ..!  ಟೇಕ್ ಇಟ್ ಈಸೀ  ಬಿಡ್ರೀ ...


ಚೈತ್ರ  .ಬಿ .ಜಿ . ಕಾನುಗೋಡು





                       

Saturday, November 17, 2012

ಇದನ್ನು ನನ್ನ ಅಪ್ಪ ಅಮ್ಮಂಗೆ ಹೇಳಿ ಪ್ಲೀಸ್ .....


                ಹಮ್ಮ್ ..,ಇನ್ನೂ ಹೊಮೆವೊರ್ಕ್ ಮಾಡ್ಬೇಕು ..,   ಹಾಲು ಕುಡೀಬೇಕು .., ಯಾಕೋ ಬೇಜಾರು ನಂಗೆ ..! ನನ್ನ ಜೊತೆ ಆಡೋಕೆ ಯಾರೂ ಇಲ್ಲ ಇಲ್ಲಿ ...., ನನ್ನ  ಜೊತೆ ಮಾತಾಡೋಕೆ ಯಾರಿಗೂ ಟೈಮ್ಮ್ ಇಲ್ಲಾ ...,     ನಂಗೆ  ಕೆಲವು ವಿಷಯಗಳು ಅರ್ಥವೇ ಆಗೋದಿಲ್ಲ .. 




          ಅಲ್ಲಾ .. ಅಮ್ಮ ಅಂತಾಳೆ , "ನೀನು ತುಂಬಾ ಚಿಕ್ಕವಳು , ನಿಂಗೆ  ಗೊತ್ತಾಗಲ್ಲ ಸುಮ್ನೆ ಇರು " , ಇನ್ನೊಮ್ಮೆ ಅಂತಾಳೆ , " ದೊಡ್ದವಾಗಿದ್ದಿಯ ಅಷ್ಟು ಗೊತ್ತಾಗಲ್ವ ನಿಂಗೆ ?",  .., ಹಾಗಾದರೆ ನಾನು ಚಿಕ್ಕವಳ ?  ದೊಡ್ಡವಳ?
          
            ನಮ್ಮ ಮಿಸ್ಸ್  ಅಂತಾರೆ ..., ಸುಳ್ಳು ಹೇಳಬಾರದು ಅಂತ , ಆದ್ರೆ ಮೊನ್ನೆ ಫೋನ್ ಬಂದಾಗ , ಅಪ್ಪ ಮನೇಲೆ ಇದ್ರೂ .., ನಾನಿಲ್ಲ ಹೇಳು ಅಂದ್ರು .., ಹಾಗಾದರೆ ಸುಳ್ಳು ಹೇಳ್ಬೇಕ ? ಅಥವ ಹೇಳ್ಬಾರ್ದ ?     



         

ಚಿತ್ರ :ಅಂತರ್ಜಾಲ ಕೃಪೆ 

           

 

          ನಂಗೆ  ಯಾವಾಗಲೂ  B + grede ಬರೋದು .., ಮೊನ್ನೆ ಯಾವುದೊ function ನಲ್ಲಿ ಅಮ್ಮ  ,'ನನ್ನ ಮಗಳು ಕ್ಲಾಸಿಗೆ ಫಸ್ಟ್' ಅಂತಿದ್ಲು , 10 ರಾಂಕ್  ಬಂದ್ರೆ 1 rank u ಅನ್ಬೇಕಾ ?  ಯಾಕೆ ?




           ಮೊನ್ನೆ ಎಷ್ಟು ಚೆನ್ನಾಗಿ ಡ್ರಾಯಿಂಗ್ ಮಾಡಿದ್ದೆ ಗೊತ್ತಾ   ..? ಅಮ್ಮಂಗೆ ತೋರ್ಸಾಕ್ ಹೋದ್ರೆ  ಟೆನ್ಶನ್ ನಲ್ಲಿ ಇದ್ದೀನಿ ಅಷ್ಟು ಗೊತ್ತಾಗಲ್ವ ಅಂತ  ರೆಗ್ಬಿಟ್ರು  ! ಎಷ್ಟು ಬೇಜಾರು ಆಯಿತು ಗೊತ್ತಾ   ನಂಗೆ ...?  ಮತ್ತೆ ಯಾಕೋ ಡ್ರಾಯಿಂಗ್ ಮಾಡೋಕೆ ಮನಸೇ ಬರ್ತಿಲ್ಲ ..

             
           ಸ್ಕೂಲ್ ನಲ್ಲಿ  ನಮ್ ಮಿಸ್ ಅಂತಾರೆ ಜಗಳ ಆಡಬಾರದು , ಅಮ್ಮ ಅನ್ನೋದೂ ಹಾಗೆ ..., ಆದ್ರೆ ಅಪ್ಪ ಅಮ್ಮ 'ನಿಂದೆ ತಪ್ಪು, ನಿಂದೆ ತಪ್ಪು' , ಅಂತ ಎಷ್ಟೊಂದು ಜಗಳ ಆಡ್ತರಲ್ಲ್ವ ? ನಾನು ಸ್ವಲ್ಪ ಪಕ್ಕದ ಮನೆ ಸಂಜು ಜೊತೆ ಜಗಳ ಆಡಿದ್ರೆ ಅದ್ರಲ್ಲಿ ತಪ್ಪೇನು ?  ಅಪ್ಪ ಅಮ್ಮ ಜಗಳ ಆಡ್ಕೊಂಡು ಸ್ವಲ್ಪ ಹೊತ್ತು ಮಾತೆ ಬಿಡ್ತಾರೆ .., ನಾನು ಅಮ್ಮನತ್ರ ಮಾತು ಬಿಟ್ರೆ " ಜಾಣ  ಮಕ್ಕಳು ಹಾಗ್ ಮಾಡ್ತಾರ ..?" ಅಂತಾಳೆ ; ಹಾಗಾದ್ರೆ ಅಪ್ಪ ಅಮ್ಮ ಜಾಣರಲ್ವ ...?

   
             ಅಮ್ಮಂಗೆ  ಬೆಳ್ಳಗ್ಗೆ  ಟೈಮ್ಮೆ  ಇರಲ್ಲ .., ಬೇಗ ಬೇಗ ಹೊರಟ್ಬಿಡ್ತಾಳೆ  ಆಫೀಸ್ ಗೆ .., ಸಂಜೆ ತುಂಬಾ ಸುಸ್ತಾಗಿರತ್ತೆ  ಅಮ್ಮಂಗೆ ! ಒಮ್ಮೊಮ್ಮೆ ಅಪ್ಪ ಬರೋಷ್ಟರಲ್ಲಿ  ನಾನು  ಮಲಗ್ಬಿಟ್ಟಿರ್ತೀನಿ .., ಬೆಳಗ್ಗೆ ಅಪ್ಪ ತುಂಬಾ ಬ್ಯುಸಿ ...,ಎಷ್ಟೋ ಸಲ ನಾನೆಳೋಷ್ಟರಲ್ಲಿ  ಅಪ್ಪ ಮನೆ ಬಿಟ್ಟಿರ್ತಾರೆ ..! 

             
             ನಾನು ಟೀವಿ ನೋಡ್ಬೇಕು ಅನ್ಕೊತೀನಿ .., ಟೈಮ್ ಆಯಿತು ಹೊಮೆವೊರ್ಕ್ ಮಾಡು ಅಂತಾರೆ, ಆಟ ಆಡಬೇಕು ಅನ್ಕೋತೀನಿ .. ಇದು ಟೀವಿ ನೋಡೋ ಟೈಮ್ ಅಂತಾರೆ.., ಅಲ್ಲ .. ಈ ಟೈಮ್ ಅನ್ನೋದು ಯಾಕಾದ್ರೂ ಇದ್ಯೋ ..? ..., ಕಣ್ಣು ಮುಚ್ಚಿ ಮಲ್ಕೊಂಡಾಗ    'ಮಲಗಿದ್ಯ ಪುಟ್ಟಿ .. ಅಂತ ಹಣೆಗೆ ಒಂದು ಮುತ್ತು ಕೊಡ್ತಾಳೆ ಅಮ್ಮ ..' ಮುತ್ತು ಕೊಟ್ಳು ಅಂತ ಕಣ್ಬಿಟ್ರೆ ,' ಟೈಮ್ ಆಯಿತು ಮಲಕ್ಕೋ ಅಂತಾ ಬೈತಾಳೆ ..' ಅಮ್ಮಂಗೆ ಎದ್ದಾಗ   ಮುತ್ತು ಕೊಡೋಕೆ ಏನು  ಕಷ್ಟ ...? 

         
           ಇದನ್ನೆಲ್ಲಾ ಅಪ್ಪ ಅಮ್ಮಂಗೆ ಹೇಳಕ್ ಹೋದ್ರೆ "ತುಂಬಾ ಮಾತೊಡೋದು ಕಲ್ತಿದಿಯ  ನೀನು   ..ಟೀವಿ ನೋಡೋದು ಸ್ವಲ್ಪ ಕಡಿಮೆ ಮಾಡು, ನಾವು ಇಷ್ಟೆಲ್ಲಾ ಕಷ್ಟ ಪಡ್ತಾ ಇರೋದು ನಿಂಗಾಗೇ .." ಅಂತಾರೆ ,  ನಂಗೆ ನಂಜೊತೆ ಆಟ ಆಡಿದ್ರೆ  ಸಾಕು , ಮಾತಾಡಿದ್ರೆ ..ಸಾಕು .., ಅದಿಕ್ಕ್ ಕಷ್ಟ ಯಾಕ್ ಪಡ್ಬೇಕು !?
 
   
ಇದನ್ನು ನನ್ನ ಅಪ್ಪ ಅಮ್ಮಂಗೆ  ಹೇಳಿ ಪ್ಲೀಸ್ ..... 

Wednesday, November 7, 2012

ಮದರಂಗಿಯಲ್ಲಿ ನೆನಪಿನ ರಂಗು ತುಂಬಿದೆ








                ಮದುವೆ ಮನೆ ಎಂದರೆ ಇನ್ನಿಲ್ಲದ ಸಂಬ್ರಮ !  ತೀರ ಹತ್ತಿರದ ಮದುವೆ ಅಂದರೆ  ಸಂಬ್ರಮದ  ತೂಕ ಇನ್ನೂ ಹೆಚ್ಚು !!   ಪೆಟ್ಟಿಗೆಯಲ್ಲಿ ಮಡಚಿಟ್ಟ  ಹಳೆಯ ರೇಷ್ಮೆ ಸೀರೆಗೆ ಹೊರ ಪ್ರಪಂಚವನ್ನು ನೋಡುವ ಸಂಬ್ರಮ .., ಬ್ಲೌಸು ಮ್ಯಾಚಿಂಗ್ ಆಗತ್ತಾ ..?  ಅಳತೆ ಸರಿಯಾಗಿದೆಯ ?  ಈ ಸೀರೆ ಹೋದ ವರ್ಷ  ಉಟ್ಟಿರುವೆನ ? ಹೀಗೆ ಸಾಗುತ್ತದೆ ಹೆಂಗಸರ ಯೋಚನೆಗಳು !!  ಇನ್ನೂ ಹೆಣ್ಣುಮಕ್ಕಳಿಗಂತೂ  ಮುಗಿಯದ  ಶಾಪಿಂಗ್ !! ಮೊದಲ ಸಲ ಸೀರೆ ಉಡುವ ಸಂಬ್ರಮವಂತೂ  ಅನುಭವಿಸಿದ ಹುಡುಗಿಯರಿಗೆ ಗೊತ್ತು !! ಯಾವ ಸೀರೆ ಚೆನ್ನಾಗಿರತ್ತೆ ? ಯಾವ ಕಲರ್ ?  ಬ್ಲೌಸ್ ಯಾವ ಡಿಸೈನ್ ಇದ್ದರೆ ಚೆಂದ ? ಸೀರೆ ಉಟ್ಟರೆ ತಾನು ನಡೆಯಬಲ್ಲೇನ ?  ಮ್ಯಾಚಿಂಗ್  ಬಳೆ , ಸರ .. ಒಹ್..!! ಶಾಪಿಂಗ್  ಸುರಿಮಳೆ !!


       ನಗರ ಜೀವನ ನಡೆಸುತ್ತಿರುವವರು .., ಮದ್ಯದೊಂದು  ಭಾನುವಾರ ಬಂದರೆ 3 ದಿನ ರಜ ಹಾಕಬಹುದಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ .., ಲಗ್ಗೆಜೆ ಪ್ಯಾಕ್  ಮಾಡಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು , ಮುಂಚೆಯೇ ಬುಕ್ ಮಾಡಿಸಿದ ಬಸ್ಸನ್ನು  ಹತ್ತಿಕೊಳ್ಳುವಾಗ  ಎಂತದ್ದೋ ಸಂಬ್ರಮ !

         ಮದುವೆ ಮನೆಯಲ್ಲಿ   ತುಂಬಾ  ಇಷ್ಟವಾಗುವ ಸಂಗತಿಯೆಂದರೆ  , ನಾವು ಎಷ್ಟೋ ವರ್ಷಗಳಿಂದ  ನೋಡದೇ  ಇರುವ ಎಲ್ಲರನ್ನೂ ಒಟ್ಟಿಗೆ  ನೋಡಬಹುದು ! ಚಿಕ್ಕಮ್ಮ ,ಚಿಕ್ಕಪ್ಪ ,ಅತ್ತೆ , ಮಾವ , ಅವರ ಮಕ್ಕಳು ,ಅತ್ತಿಗೆ , ಭಾವ , ಅಜ್ಜ , ಅಜ್ಜಿ ಅಮ್ಮುಮ್ಮ .., ಹೀಗೆ ..,  ಹಾಗೆ ಸುಮ್ಮನೆ  ಎಲ್ಲರೂ ಸೇರುವುದು  ವಾಸ್ತವಕ್ಕೆ ದೂರವಾದ ಮಾತು , ಅದೇನೇ  ಚಿಕ್ಕ ಪುಟ್ಟ ಸಮಸ್ಯೆ, ತೊಂದರೆ  ತಾಪತ್ರಯಗಳಿದ್ದರೂಗಳಿದ್ದರೂ   ಮನೆಯೊಳಗೇ  ಇಟ್ಟು ಬಾಗಿಲು ಹಾಕಿ ಮದುವೆ  ಮನೆಗೆ ಹೊರಟು  ಬಿಡುತ್ತೇವೆ !

   
         ಹಳ್ಳಿಗಳಲ್ಲಿ  ಮದುವೆ  ಅಂದರೆ  2 ದಿನ ಮುಂಚೆಯೇ ಕಾರ್ಯಕ್ರಮಗಳು  ಶುರುವಿಟ್ಟು ಕೊಳ್ಳುತ್ತದೆ , ಗಂಡಿನ  ಮನೆಯಾದರೆ  ಸೋಮವರ್ಥನೆ , ಹೆಣ್ಣಿನ ಮನೆಯಾದರೆ ನಾಂದಿ ಇಟ್ಟುಕೊಳ್ಳುತ್ತಾರೆ .  ಮರುದಿನ ಬೆಳ್ಳಗ್ಗೆ ಬೇಗ ಎದ್ದು  ತಯಾರಿಯಾಗಿ ಗಂಡಿನವರಾದರೆ ದಿಬ್ಬಣ ಹೋರಡಬೇಕು , ಹೆಣ್ಣಿನವರಾದರೆ  ದಿಬ್ಬಣ ಬರಮಾಡಿಕೊಳ್ಳಬೇಕು . ಆ ನಂತರ ಹಾರ ಬದಲಾವಣೆ , ಮಾಂಗಲ್ಯ ಧಾರಣೆ , ಸಪ್ತಪದಿ ..  ಹೋಮ .. ಹೀಗೆ ಸಾಗುತ್ತದೆ  ಮದುವೆಯ ಶಾಸ್ತ್ರಗಳು .

     
       ಮದುವೆಗಳನ್ನು ಊರು ಹಳ್ಳಿಗಳ ಕಡೆ ನೋಡಿ ಅಬ್ಯಾಸವಿದ್ದ  ನನಗೆ ಬೆಂಗಳೂರು ಮದುವೆ  ನೋಡಿ ಆಶ್ಚರ್ಯ  ಪಟ್ಟಿದ್ದೆ  ! ಇಲ್ಲಿ ಮದುವೆ  ಅಂದರೆ  ಬಣ್ಣ ಹಚ್ಚಿಕೊಂಡ ಮದುಮಕ್ಕಳು ಸ್ಟೇಜ್  ಮೇಲೆ ನಿಂತಿರುತ್ತಾರೆ . ನಾವು ಸ್ಟೇಜ್  ಮೇಲೆ ಹೋಗಿ ಕ್ಲೋಸ್ ಅಪ್  ಆಡ್ ತರ  ಹಲ್ಲು ತೋರಿಸಿ ಹ್ಯಾಪಿ ಮ್ಯಾರೀಡ್  ಲೈಫ್ ಅಂತ ಉಸುರಿ ಫೋಟೋಗ್ರಾಫರ್  ಪರ್ಮಿಷನ್ ಕೊಟ್ಟಮೇಲೆ ಸ್ಟೇಜ್ ನಿಂದ ಕೆಳಗಿಳಿದು ಬರಬೇಕು ! ಹಾಗಾದರೆ ಮದುವೆ ಮುಗಿದಂತೆ !  ಅಥವಾ ನಾನು ನೋಡಿದ ಮದುವೆಗಳು ಮಾತ್ರ ಹಾಗಿತ್ತೇನೋ ..

       ನಗರದಷ್ಟಲ್ಲವಾದರೂ ಹಳ್ಳಿಗಳಲ್ಲಿ  ಮದುವೆಯ ರೀತಿ ರಿವಾಜು ಹಾಗೆ ಇದ್ದರೂ ಸ್ವರೂಪದಲ್ಲಿ ಬದಲಾವಣೆಯಾಗಿದೆ .  ಮನೆಯ ಮುಂದಿನ ಚಪ್ಪರ ಮರೆಯಾಗಿ ಅದೇ ಜಾಗದಲ್ಲಿ ಶಾಮಿಯಾನ ಬಂದು ನಿಂತಿದೆ . 4-5 ದಿನಗಳವರೆಗೆ ನಡೆಯುತ್ತಿದ್ದ ಮದುವೆಗಳು 2 ದಿನಕ್ಕೆ ಬದಲಾಗಿದೆ  . ಕೂಲಿ ಕೆಲಸಗಾರರ  ಅಭಾವ , ಜನರ ಅಭಾವ , ಸಮಯ ಅಭಾವಗಳು  ಮದುವೆಗಳಲ್ಲಿ  ಕೆಲವು ಮಾರ್ಪಾಡುಗಳನ್ನು ತಂದಿದೆ .

          
        ಅಣ್ಣನ ಮದುವೆ  ಮುಗಿಸಿ ಬೆಂಗಳೂರಿಗೆ ಬಂದು 4 ದಿನಗಳಾದರೂ ಇನ್ನೂ ಅದರದ್ದೇ ಗುಂಗು !   ಕೈಯಲ್ಲಿನ ಮದರಂಗಿ , ದಿಬ್ಬಣ ಬಸ್ಸಿನ ಅಂತಾಕ್ಷರಿ , ಎಲ್ಲರೂ ಸೇರಿ ಕಲೆತು  ಆಡಿದ ಮಾತು , ನಗು, ರಾತ್ರಿಯಲ್ಲಿ ಮಿನುಗುವ ಲೈಟ್ ಸೆಟ್ಟಿಂಗ್ಸ್ , ಹುಡುಗಿಯರ  ಗೆಜ್ಜೆ ದನಿ  , ಹೆಂಗಸರ ಬಳೆ ಸದ್ದು , ಮಕ್ಕಳ ಕೂಗಾಟ, ಎಲ್ಲರ ಗಡಿಬಿಡಿ , ಗಡಿಬಿಡಿಯಲ್ಲಿನ  ಸಂಬ್ರಮ , ಮದುವೆ  ಮನೆಯಲ್ಲಿ  4-5 ದಿನ ಹೇಗೆ ಕಳೆಯಿತು ತಿಳಿಯದಷ್ಟು ಸಂಬ್ರಮವಾಗಿ ಸಮಯ ಉರುಳಿತ್ತು .


       ಅಣ್ಣನ ಮದುವೆ ಮುಗಿಸಿ  ಅಲ್ಲಿಂದ ಹೊರಟುನಿಂತಾಗ  ಭಾರವಾಗಿದ್ದು;  ಬ್ಯಾಗನ್ನು ಏರಿಸಿಕೊಂಡ  ಹೆಗಲೊಂದೇ  ಅಲ್ಲ ಅನ್ನಿಸಿತ್ತು. ..!!   ಈಗ ಉಳಿದಿದ್ದು  ಮೊಣಕೈಯವರೆಗೆ  ಹಚ್ಚಿಕೊಂಡ ಮದರಂಗಿ ಮತ್ತು  ಅದನ್ನು ನೋಡಿದಾಗಲೆಲ್ಲ ಮರುಕಳಿಸುವ ಅಣ್ಣನ ಮದುವೆಯ  ಸಿಹಿ ನೆನಪು ಮಾತ್ರ !!!





Monday, October 29, 2012

ತಪ್ತ ವಿರಹಿಣೀ .....





                                                           
 
 
 
ಕೆನ್ನೆಯ ಮೆಲಿದ್ದ ಕೂದಲು ಸರಿಸಿ
ತಲೆ ನೇವರಿಸಿ
ಮುತ್ತಿನ ಶುಭೋದಯ ತರುತ್ತಿದ್ದ
ಆತನೆಲ್ಲಿ ......?
ಕೃಷ್ಣನಿಗೋ  ಮುಗಿಯದ ರಾಜಕಾರಣ;


ಮುತ್ತಿಗೊಂದು ತುತ್ತಿಡುತ್ತ
ತುತ್ತಿಗೊಂದು ಮುತ್ತಿಡುತ್ತ
ಬರಿದಾಗಿಸುತ್ತಿದ್ದ ತಟ್ಟೆಗೂ ನೆನಪಿದೆ
ಆತನೆಲ್ಲಿ ........?
ಕೃಷ್ಣನಿಗೋ ಸದಾ ಗೋಪಿಕೆಯರ ಜೊತೆ;


ಆಸೆಗಳ ಭಾರಕ್ಕೆ ಮುಚ್ಚಿದ  ರೆಪ್ಪೆಗಳಿಗೆ
ಬಾಗಿ ಚುಂಬಿಸಿ
ಲೋಕವನ್ನೇ ಮರೆಸುತ್ತಿದ್ದ
ಆತನೆಲ್ಲಿ .........?
ಕೃಷ್ಣನಿಗೋ  ಯುದ್ದ ಸಂಬ್ರಮ;


ಪ್ರಳಯವೇ ಸಂಭವಿಸಿದರೂ
  ಸುರಕ್ಷಿತವೆನಿಸುವಂತೆ
ಬಿಗ್ಗಿಬಿಗಿ ಬಾಹುಗಳಲ್ಲಿ  ಬಂಧಿಸುತ್ತಿದ್ದ
ಆತನೆಲ್ಲಿ ........?
ಕೃಷ್ಣನಿಗೋ ಅಪಹರಣಕಾಯದಲ್ಲಿ ತನ್ಮಯ;


ಸ್ವಲ್ಪವೂ ಸುಕ್ಕಾಗದ ಚಾದರ
ನೀರಸ ಬೇಸರದ  
ಕಾಯುವಿಕೆಯ ಕತೆ ಹೇಳುವಾಗ
ಆತನೆಲ್ಲಿ ......?
ಕೃಷ್ಣನಿಗೋ  16 ಸಾವಿರ ಹೆಂಡತಿಯರು ;


ರಾಧೆಗೋ  ಕೃಷ್ಣನೇ  ಆಕೆಯ ಪ್ರಪಂಚ
ಕೃಷ್ಣನಿಗೆ ಆಕೆಯು ಪ್ರಪಂಚದ ಒಂದು ಭಾಗ;


ರಾಧೆಯಂತಿರುವ  ಹೆಣ್ಣುಗಳು 
 ಮೆಚ್ಚೋ... ಹುಚ್ಚೋ ...
ಗೊತ್ತಿಲ್ಲ  ನಮಗೆ
ಗೊತ್ತಿರುವ ಕೃಷ್ಣ  ನಗುತ್ತಿದ್ದಾನೆ ಕಣ್ಣಲ್ಲೇ .


 

Thursday, October 25, 2012

ಬರಿದೆ ಕಾಡುವ ನೆನಪುಗಳಲ್ಲಿ ಏನೂ ಇಲ್ಲ .....!


      
         ಬೇಡವೆಂದರೂ ಬರುವ ನೆನಪುಗಳು ಸುಮ್ಮನಿರಲು ಏನು ಮಾಡಬೇಕು ...?  ಹಾಗಲ್ಲ... ಪ್ರಯತ್ನ ಮಾಡಿದಷ್ಟೂ ಹೆಚ್ಚು ಕಾಡುವ  ನೆನಪುಗಳು  ಥೇಟ್  ರಚ್ಚೆ ಹಿಡಿದ ಮಗುವಿನಂತೆ  ; ಮಾತು ಕೇಳಲು ಸುತರಾಂ ಒಪ್ಪದು !  ಬರಿದೆ  ಕಾಡುವ ನೆನಪುಗಳಲ್ಲಿ  ಏನೂ ಇಲ್ಲ !  ಇವತ್ತಿಗೂ ಗೊತ್ತಾಗುತ್ತಿಲ್ಲ ನಾನು ಮಾಡಿದ್ದು ಸರಿಯ ? ತಪ್ಪಾ ?  ಮರಳು ನನಗೆ!  ತಪ್ಪು ಸರಿಗಳ ಎಲ್ಲೆ  ದಾಟಿ ಬಹಳ ದೂರ  ಬಂದದ್ದಾಗಿದೆ ! ಈಗೇನು ಹುಚ್ಚು ವಿಮರ್ಶೆ ನನ್ನದು !  ಅಪ್ಪ, ಅಮ್ಮ  ಅಣ್ಣ , ಅಜ್ಜಿ , ಮನೆ ಊರು  ಸರ್ವಸ್ವವನ್ನು   ಬಿಟ್ಟು ಬರಲು ನನಗೆ ಪ್ರೇರೇಪಿಸಿದ  ಅಷ್ಟು ದೊಡ್ಡ ಸಂಗತಿಯಾದರೂ ಯಾವುದು ?  ಸೊ ಕಾಲ್ಡ್  ಪ್ರೀತಿ ??


             ಕಾಲೇಜು ಮೆಟ್ಟಿಲು ಹತ್ತಿದ್ದೇ  ಒಂದು ದಿಗ್ವಿಜಯ ನನ್ನ ಪಾಲಿಗೆ !  ಭಟ್ರ ಮಗಳು ಬೇರೆ!  ಅಷ್ಟು ಸಲೀಸಾಗಿ ಕಾಲೆಜಿಗೆ ಹೋಗೋದು ಅಂದ್ರೆ ಏನು ?  ಓದೋದು ಅಂದ್ರೆ ಏನು ? ಓದಿ ಮಾಡಬೆಕಾದ್ದು ಏನು ?  ಅದು ಹೇಗೋ ಅಣ್ಣನ ಕಣ್ಣು ಕಾವಲಿನ ಜೊತೆಗೆ ಕಾಲೇಜಿಗೆ ಹೋಗಿಬಂದದ್ದೂ ಆಯಿತು ! ಅವನ ಕಣ್ತಪ್ಪಿಸಿ  ಲೆಕ್ಟುರನ ಪ್ರೀತಿಯಲ್ಲಿ  ಬಿದ್ದಿದ್ದೂ   ಆಯಿತು !   ಎಷ್ಟು ದಿನ ಕಣ್ತಪ್ಪಿಸಲು ಸಾದ್ಯ ? ಮನೆಯವರಿಗೆ ವಿಷಯ ಗೊತ್ತಾಗಿಬಿಟ್ಟಿತ್ತು !  ಚಿಕ್ಕವಳಿದ್ದಾಗಿನಿಂದ  ರಾಮಾಯಣ ಮಹಾಭಾರತದ ಕತೆಯನ್ನು ಕೇಳಿದ್ದರೂ ಅದರ ಅನುಭವ ಆದದ್ದೂ ಮಾತ್ರ ಅವತ್ತೇ !!  ಅಪ್ಪ, ಅಣ್ಣನ ರುದ್ರವತಾರ! , ಅಮ್ಮನ ಕಣ್ನೀರಿನ  ಕಟ್ಟೆಯೊಡೆದು  ಊರಿಗೆಲ್ಲ ಸಾಕಾಗುವಷ್ಟು  ನೀರು ! ಅವತ್ತು ನಮ್ಮ ಮನೆ ಥೇಟ್  ಯುದ್ದಭೂಮಿ !

   
               
           ಹೆದರಿಸಿ ಹೇಳಿದ್ದಾಯಿತು , ಹೊಡೆದು ಬಡಿದಿದ್ದೂ ಆಯಿತು , ನೆಂಟರಿಷ್ಟರಿಂದ  ಒಂದು ರೌಂಡ್  ಕೌನ್ಸಲಿಂಗೂ   ಆಯಿತು , ಉಪವಾಸ ಸತ್ಯಾಗ್ರಹ .., ಉಹ್ಹುಂ .., ನನ್ನದು ಒಂದೇ ಹಠ , ನಾನು ಅವನನ್ನೇ ಮದುವೆಯಾಗೋದು ! "ಆಯಿತಮ್ಮ ನಿನ್ನಿಷ್ಟ "  ಅಂದು ಮದುವೆ  ನಡೆಸಿಕೊಡಲು ಅದೇನು ಈಗಿನ ಕಾಲವೇ! ?  ಎಳೆದು ತಂದಾದರೂ ಮದುವೆಯನ್ನು  ಮಾಡಿಬಿಡುತ್ತಿದ್ದ ಕಾಲವದು !  ಗಂಟುಮೂಟೆ ಕಟ್ಟಿಕೊಂಡು  ರಾತ್ರಿ 1 ಗಂಟೆಯ ಸುಮಾರಿಗೆ ಥೆಟ್  ಸಿನಿಮ ಶೈಲಿಯಲ್ಲಿ  ಮನೆ ಬಿಟ್ಟು ಹೊರಟುಬಿಟ್ಟೆ !  ಹಾಗೆ ಬಂದವಳು ಇವತ್ತಿಗೂ ಹಿಂದಿರುಗಿಲ್ಲ !  ಬಂದ ಒಂದೆರಡು ವರುಷಗಳ ನಂತರ ಅಪ್ಪ ಅಮ್ಮನ ನೆನಪಾಗುತ್ತಿತ್ತು .. 8- 10 ವರುಷಗಳ ನಂತರ ಅವರ  ಮರಣದ  ಸುದ್ದಿ ಕೇಳಿ .., ಬೇಸರವಾದರೂ ಊರಿನ ನೆನಪು  ಮಸುಕಾಗಿ ಕ್ರಮೇಣ ಸೆಳೆತ ಕಡಿಮೆಯಾಗಿತ್ತು .

            
               ಎಲ್ಲ ಬಿಟ್ಟು ಕಟ್ಟಿಕೊಂಡು  ಬಂದ ಈತನಾದರೂ ಎಂತವನು ? ಸಭ್ಯ , ಒಳ್ಳೆಯವ , ಸಾಮನ್ಯ ಬುದ್ದಿವಂತಿಕೆ , ಸಾಮಾನ್ಯ  ವಿದ್ಯೆ , ಸಾಮನ್ಯ ವ್ಯಕ್ತಿತ್ವ , ಎಲ್ಲದರಲ್ಲೂ 40 -50 ಮಾರ್ಕ್ಸು ಕೊಡಬಹುದಾದ  ಸಾಮನ್ಯ ಪ್ಯಾಕೆಜಿನಂತಿದ್ದ .
ಸಾಮಾನ್ಯ ಬದುಕು ಸಾಗುತ್ತಿತ್ತು . 'ಚಂದ್ರನನ್ನು ತೋರಿಸು ' ಅಂದರೆ ರೋಮ್ಯಾಂಟಿಕ್  ಆಗಿ ಉತ್ತರಿಸಲು ಬರದಿದ್ದರೂ ' ನಿಂಗೆ ಕಣ್ಣೂ ಕಾಣೋಲ್ಲವ?' ಎನ್ನುವಷ್ಟು ಒರಟನಾಗಿರಲಿಲ್ಲ !    ಅದು ನಾನು ಕಟ್ಟಿಕೊಂಡು ಬಂದ ಪುಣ್ಯ ಎನಿಸುತ್ತದೆ ನಂಗೆ !  ನಂಗೆ ಆತನ ಬಗ್ಗೆ  ಒಂದಷ್ಟೂ ಗೊತ್ತಿರಲ್ಲಿಲ್ಲ !  ಕುಡುಕ ಪಡುಕನೂ , ಕಳ್ಳನೂ, ಸುಳ್ಳನೂ , ಅಷ್ಟೇ ಏಕೆ ಆತನಿಗೆ ಇನ್ನೊಂದು ಮದುವೆಯೇ ಆಗಿದ್ದರೂ ನನಗೆ ತಿಳಿಯುವ ಸಂದರ್ಭ, ಬುದ್ದಿ ಎರಡೂ ಇರಲಿಲ್ಲ ..! ಏನೋ ಪ್ರೀತಿ  ಅಂಥದ್ದೇನೋ  ಅನಿಸಿತ್ತು  , ತುಂಬಾ ಯೋಚಿಸದೆ ಆತನ ಹಿಂದೆ ನಡೆದುಬಂದು ಬಿಟ್ಟಿದ್ದೆ !!


             
           ಆತನ ಬಗ್ಗೆ ಒಂದಷ್ಟೂ ಗೊತ್ತಿರಲ್ಲಿಲ್ಲ ಎನ್ನುವುದು ನಿಜ ., ಏನೂ ಯೋಚಿಸದೆ ಬಂದುಬಿಟ್ಟಿದ್ದು ಎಷ್ಟು ನಿಜ ?  ಸಾಕಾಗಿತ್ತು ನಂಗೆ ಆ ಊರು !  ಆ ಬದುಕು ! ಜಾತ್ರೆಯಲ್ಲಿ ಕಂಡ ಬಣ್ಣದ ಲಂಗವನ್ನು ತೆಗೆದುಕೊಳ್ಳಲಾಗದಷ್ಟು ಕಟ್ಟಳೆ,   ಸ್ವತಂತ್ರವಾಗಿ ಓಡಾಡಲಾಗದಷ್ಟು  ಅಣ್ಣನ ಕಾವಲು , ತಂದದ್ದನ್ನೇ ಉಟ್ಟು ತೊಟ್ಟುಕೊಳ್ಳಬೇಕಾಗಿದ್ದ  ಅಭಿರುಚಿಹೀನ  ಬದುಕು . ಎಲ್ಲದಕ್ಕಿಂತ ಹೆಚ್ಚಾಗಿ  ನಾನು ನೋಡಿದ  ನನ್ನ ಅಕ್ಕನ ಬದುಕು .., ಬೆಳೆಗ್ಗೆಯಿಂದ ಸಂಜೆಯ ತನಕ ಸ್ವಲ್ಪವೂ ಬಿಡುವಿಲ್ಲದ ಕತ್ತೆಯ ದುಡಿತ !  ಅವರಿವರ ಮರ್ಜಿಯಲ್ಲೇ ಕಳೆದು ಬಿಟ್ಟ ಜೀವನ ! ಅಂಜಿ ಅಂಜಿ ಆಡುತ್ತಿದ್ದ ಮಾತು , ನಡೆ ! ಎರಡು  ಸುಂಬಳ ಸುರಿಯುವ ಮಕ್ಕಳು , ಅವಕ್ಕೇ ಕೈಗಿದ್ದರೆ ಕಾಲಿಗಿಲ್ಲ ,ಕಾಲಿಗಿದ್ದರೆ ಕೈಗಿಲ್ಲ ! ಮತ್ತೆ  ಮೂರನೆಯದಕ್ಕೆ ತಯಾರಿ !   ನಂಗೂ ಇದಕ್ಕಿಂತ ಹೆಚ್ಚಿನದು ಇನ್ನೇನೂ ಸಿಗಲು ಸಾದ್ಯ ಇರಲಿಲ್ಲ ! 

         
             
             ಮತ್ತೆ ಕಣ್ಣು ಟೀಪಾಯೀಯತ್ತ  ಹೊರಳಿತು ,   ಅಲ್ಲಿದ್ದಿದ್ದು ಅಕ್ಕನ ಮಗಳ ಮದುವೆಯ ಇನ್ವಿಟೇಶನ್ ಕಾರ್ಡ್  . ಲವ್ ಮ್ಯಾರೇಜು !  ಹುಡುಗ ಬೇರೆ  ಜಾತಿಯವನು ,  ಇಬ್ರೂ ಸಾಫ್ಟ್ವೇರ್  ಎನ್ಜನೀರ್ಸ್. ಏನೂ ಗೊತ್ತಿಲ್ಲದೇ ಆಕೆ ಆತನೊಂದಿಗೆ ಬದುಕಿನ ಹೆಜ್ಜೆ ಇಡುವವಳಲ್ಲ;  ಆತ ಸಾಮಾನ್ಯ ಪ್ಯಾಕೆಜೂ ಅಲ್ಲ ... ;  ಮತ್ತು  ಮದುವೆಯನ್ನು  ಮನೆಯಲ್ಲೇ ಮಾಡಿಕೊಡುತ್ತಿದ್ದಾರೆ  ಅದ್ದೂರಿಯಿಂದ!




ಚೈತ್ರ  ಬಿ . ಜಿ . 

          

 

       




            



     
           


Tuesday, October 16, 2012

ವಿಶ್ ಯು ಹ್ಯಾಪಿ ಬರ್ತ್ ಡೇ ...




            ಇನ್ನೊಬ್ಬ ವ್ಯಕ್ತಿಗೆ  ದೈಹಿಕ ನೋವಾದಾಗ  ನಮಗೂ ಅದರ ಅನುಭವವಾಗುತ್ತದ?   ಹಾಗಂತ ಮುಂಚೆ ಯಾರಾದರೂ ಅಂದಿದ್ದರೆ  ನಕ್ಕು ಬಿಡುತ್ತಿದ್ದೆ ..,  ಆದರೆ  ನನ್ನ  ಮಗಳಿಗೆ BCG ಎಂಬ ಮೊದಲ ಚುಚ್ಚು ಮದ್ದು  ಕೊಡುವ  ಕ್ಷಣದಲ್ಲಿ  ನಾನು ಅನುಭವಿಸಿದ  ಯಾತನೆ ನನಗೆ ಮಾತ್ರ  ಗೊತ್ತು ..., ನಂತರ  ದಿನಗಳಲ್ಲಿ  ಪ್ರತಿ ಚ್ಚುಮದ್ದಿನ   ಹಿಂದಿನ  ದಿನದಿಂದಲೇ .ಯಾತನೆಯ ಕ್ಷಣಕ್ಕೆ ಮನಸ್ಸು ಚಿಂತೆಗೀಡಾಗುತ್ತಿತ್ತು .
 







      ಆಕಾಶ ಬೀಳುತ್ತಿದೆ ಎಂದರೂ ..,' ಬೀಳುವತನಕ  ಮಲಗಬಹುದಲ್ಲ ' ಅಂತ ಯೋಚಿಸುವ ಜಾಯಮಾನ  ನನ್ನದು !  ಹಾಗಿರುವಾಗ  ನನಗೆ ನನ್ನ ಮಗಳ  ಕೇವಲ ಒಂದೇ ಒಂದು ಮುಲುಗಾಟಕ್ಕೆ ತಟ್ಟನೆ ಎಚ್ಚರವಾಗಿ ಬಿಡುತ್ತಿದ್ದಿದ್ದು  ಹೇಗೆಂದು  ಇವತ್ತಿಗೂ ವಿಸ್ಮಯವೇ !


                                                            
                                                      


           ಇವತ್ತಿಗೂ   ಸಾಂಬಾರು ಪುಡಿಯನ್ನು ಅಮ್ಮನಿದಲೋ ಅತ್ತೆಯಿಂದಲೋ ತರಿಸಿಕೊಳ್ಳುವ ನಾನು, ಮಗಳಿಗಾಗಿ  "ರಾಗಿ ಮಣ್ಣಿ " ಎಂಬ ಅತಿ  ಕಷ್ಟದ (ನನಗೆ !) ತಿನಿಸನ್ನು ಮಾತ್ರ ' ಭಯಂಕರ ಶ್ರದ್ದೆ , ಇನ್ನಿಲ್ಲದ ಮುತುವರ್ಜಿಯಿಂದ ನಾನೇ ತಯಾರಿಸುತ್ತಿದ್ದೆ .




   
               ನಾನು ನನ್ನ  ಪುಟ್ಟ ಮಗಳನ್ನು ಬೆಂಗಳೂರೆಂಬ ಅಪರಿಚಿತ ನಗರಕ್ಕೆ ಎತ್ತಿಕೊಂಡು ಬಂದಿಳಿದಾಗ ಆಕೆಗೆ ಕೇವಲ 3 ತಿಂಗಳು 8 ದಿನ !  ನಮ್ಮಿಬ್ಬರದೆ  ಒಂದು ಪ್ರಪಂಚವಾಗಿಬಿಟ್ಟಿತ್ತು . ' ನನ್ನ ಮಗಳು ನನ್ನನ್ನು ಬಿಟ್ಟು ಇರಲಾರಳು' ನಿಜ ,   ನಾನು ಆಕೆಯನ್ನು  ಒಂದು ದಿನಕ್ಕೂ ಬಿಟ್ಟಿರಲಾಗದು ಎಂಬುದು ಅದಕ್ಕಿಂತ ಹೆಚ್ಚು ನಿಜ .
         


                                                                 
                    ಇಂಥ ಸಂಗತಿಗಳು   ಹತ್ತು ಹಲಾವರು ..

            ಬಹುಷ  ಇದು ಎಲ್ಲ   ತಾಯಂದಿರ  ಅನುಭವ .., ಪ್ರಕೃತಿಗಿರುವ  ಶಕ್ತಿಯೇ ಅಂತದ್ದು .., ಸಮಯ ಬಂದಾಗ  ತನ್ನನ್ನು ತಾನು ಹೊಂದಿಸಿಕೊಳ್ಳುವುದು ...
             
                                                          


            ಇವತ್ತು ನನ್ನ ಮಗಳ 5ನೆಯ ವರುಷದ ಹುಟ್ಟುಹಬ್ಬ ... ಅಲ್ಲ .. ನನ್ನಲ್ಲಿರುವ ಅಮ್ಮನಿಗೆ ಇವತ್ತಿಗೆ 5 ವರುಷ .....,  ತಾಯಿತನದ ಸಂತೋಷವನ್ನು ಇಷ್ಟೊಂದು ಎಂಜಾಯ್ ಮಾಡಲು  ಅವಕಾಶ ಮಾಡಿಕೊಟ್ಟ ನನ್ನ ಮಗಳಿಗೊಂದು  ದೊಡ್ಡ ಥ್ಯಾಂಕ್ಸ್ ..

    ಹುಟ್ಟುಹಬ್ಬದ ಶುಭಾಶಯಗಳು ನನ್ನ ಮಗಳಿಗೆ !!


     

Thursday, October 11, 2012

ನೀನು ನಕ್ಕ ನಗುವನ್ನು ಹೆಕ್ಕಿ ಜೇಬಲ್ಲಿರಿಸಿಕೊಂಡಿದ್ದೇನೆ ......


                  ಕಾಲೇಜಿನ ಕಾರಿಡಾರಿನ ಕಂಬಕ್ಕೊರಗಿ  ಒಂದು ಕಾಲನ್ನು  ಕಂಬಕ್ಕಾನಿಸಿ ಎದೆಯ ಮೇಲೆ ಕೈ ಕಟ್ಟಿ  ನಿಂತ ನನಗೆ  ನೀನು ಆ ತುದಿಯಿಂದ ಬರುವುದನ್ನು ನೋಡುತ್ತಿದ್ದರೆ ಕಾಲವು ಹಾಗೆ ನಿಂತು ಹೋಗಬಾರದೇ  ಎನಿಸುತ್ತಿದ್ದುದು  ಸುಳ್ಳಲ್ಲ ..,   ಕೆನ್ನೆ ಮೇಲೆ ಆಟವಾಡುತ್ತಿದ್ದ   ಕೂದಲು .., ಕಿವಿಯಲ್ಲಿ ತೂಗುತ್ತಿದ್ದ ಚಿನ್ನದ ರಿಂಗು ನಿನ್ನ ಮಾತಿಗೆ ತಾಳ ಹಾಕುತ್ತಿದ್ದ  ಪರಿ .., ಮಾತಿಗೊಮ್ಮೆ ವಿಸ್ಮಯದಿಂದ ಅಗಲವಾಗುತ್ತಿದ್ದ ಕಡು ಕಪ್ಪು ಕಣ್ಗಳು ...ಮತ್ತು ಅದರೊಳಗೆ   ಜಾರಿ ಬಿದ್ದ ನಾನು  .., ಗಾಳಿಗೆ ಕೊಂಚವೇ ಹಾರುತ್ತಿದ್ದ ನಿನ್ನ ಚೂಡಿದಾರದ  ವೇಲು ..., ಒಮ್ಮೊಮ್ಮೆ ನೀನು ಮುಡುಯುತ್ತಿದ್ದ ಮಲ್ಲಿಗೆ ...ಅದರ ಗಂಧ ನನ್ನಲ್ಲಿ ತರುತ್ತಿದ್ದ ಸಣ್ಣನೆಯ ಕಂಪನ   ... , ಅತಿ ಮೆಲ್ಲಗೆ ಕೇಳಿಸುತ್ತಿದ್ದ ಗೆಜ್ಜೆಯ ಸದ್ದಿಗೆ  ತಪ್ಪುತ್ತಿದ್ದ  ನನ್ನ ಹೃದಯ ಬಡಿತ...,  ಎಲ್ಲಕಿಂತ ಮಿಗಿಲಾಗಿ  ನಿನ್ನ ನಗು.... , ನೀನು ನಕ್ಕ ನಗುವನ್ನು ಹೆಕ್ಕಿ ನನ್ನ ಜೇಬಲ್ಲಿರಿಕೊಂಡಿದ್ದೇನೆ , ನಿನ್ನ ನಗೆಯ ತಂಪು ನನ್ನ ಎದೆಯ ತುಂಬೆಲ್ಲ .....,  ನಿನ್ನಿಂದ ದೃಷ್ಟಿ ಬದಲಾಯಿಸಲು ನನ್ನ ಕಣ್ಣುಗಳು  ನನಗೇ  ಸಹಕರಿಸುತ್ತಿರಲ್ಲಿಲ್ಲ .., ಇದ್ಯಾವುದರ ಅರಿವೂ ನಿನಗಿರಲಿಲ್ಲ  .., ಅಥವ ಇದ್ದಂತೆ ತೋರಿಸಿಕೊಕೊಳ್ಳುತ್ತಿರಲ್ಲಿಲ್ಲ ..., ನೀವು ಹುಡುಗಿಯರು ಸ್ವಲ್ಪ ಹಾಗೆ ತಾನೇ ...!?

    
         
               ಗೆಳೆಯರು ಕೇಳುತ್ತಿದ್ದರು ' ಏನೋ ಲವ್ವಾ ..?'  ತಲೆಬಗ್ಗಿಸಿ  ಮೆಲುನಗುತ್ತಿದ್ದೆ , ನನಗೆ ಗೊತ್ತಿದ್ದರೆ ತಾನೇ ಹೇಳಲು ..!  ಮಾತಡಸಲ್ವೇನೋ ...?'  ಅನ್ನುತ್ತಿದ್ದರು , ಅದಕ್ಕೂ  ನನ್ನ ನಗುವೇ ಉತ್ತರ .., ಕಾಲೇಜಿನ 3 ವರ್ಷದಲ್ಲಿ ಒಂದು ದಿನಕ್ಕೂ ನಾನು ನಿನ್ನ ಮಾತಾಡಿಸುವ  ಪ್ರಯತ್ನವನ್ನೇ  ಮಾಡಲ್ಲಿಲ್ಲ .., ಎಷ್ಟೋ ಸಲ ನಿಶ್ಯಬ್ದ ರಾತ್ರಿಯ ಒಂಟಿತನದಲ್ಲಿ ಯೋಚಿಸುತ್ತಿದ್ದೆ .., ಬಹುಷ.. ನನಗೆ ಪ್ರ್ರೀತಿ, ಗೀತಿ ಮದುವೆಯೆಂಬ  ಗಂಭೀರತೆಯ ಸುಳಿಯಲ್ಲಿ ಸಿಕ್ಕಲು ಮನಸು ಭಯವಿಡುತ್ತಿತ್ತು ,  ಮನೆಯ ಮೇಲಿದ್ದ ಸಾಲ .. ಅಪ್ಪನ ಬೇಜಾವಬ್ದಾರಿತನ .., ಅಮ್ಮನ ಖಾಯಿಲೆ ..,ಅಕ್ಕನ ಮದುವೆ  ಜವಾಬ್ದಾರಿ ..., ನನ್ನ ಮುಂದಿನ ಓದು.... ನಡೆಯಬೇಕಾದ ದಾರಿ ದೂರವೂ , ಕಷ್ಟವೂ  ಅಸ್ಪಷ್ಟವೂ ಇದ್ದಂತನಿಸಿತು . ಊಹುಂ ... ನಿನ್ನನ್ನು,  ನಿನ್ನ ನಗುವನ್ನು ನನ್ನ ಪರಧಿಯೊಳಕ್ಕೆ ಸೇರಿಸಿಕೊಳ್ಳಲು ಮನಸ್ಸು ಯಾಕೋ ನಿರಾಕರಿಸುತ್ತಿತ್ತು ..., ಮನಸು, ಕಾಲ ಎರಡೂ ಪಕ್ವವಾಗಿಲ್ಲ ಎನಿಸಿತ್ತು . ಅದಕ್ಕೆ ಇರುವಷ್ಟು ಕ್ಷಣ ನಿನ್ನ  ನಗುವಿನ ಪರಧಿಯೊಳಕ್ಕೆ ನಾನಿದ್ದುಬಿಡುತ್ತಿದ್ದೆ .

         " ಪಪ್ಪಾ .. ಲುಕ್ ಅಟ್ ಮೀ ....", ತಲೆ ಎತ್ತಿ ನೋಡಿದೆ , ಚಿಟ್ಟೆಯಂತೆ ಹಾರಿಬಂದ ಮಗಳು ಎದುರಿನ ಸೋಫಾ ಮೇಲೆ ಕುಳಿತ್ತಿದ್ದಳು , ಏನು ದೈರ್ಯ!  ಏನು  ಕಾನ್ಫಿಡೆನ್ಸು! ಸ್ವಲ್ಪವೂ ಸಿಗ್ಗಿಲ್ಲ ಹುಡುಗಿಗೆ !!  ಮೆಚ್ಚುಗೆಯ ನಗು ನನ್ನ ತುಟಿಗಳ ಮೇಲೆ !  ಪಪ್ಪಾ .. ಗೈ  ಇಸ್ ಸೋ ನೈಸ್ .. ಇಟ್ ಸೀಮ್ಸ್ ಹಿ  ಲವ್ಸ್ ಮಿ  ಪಪ್ಪಾ ..  .." 2ನೇ puc  ಓದುತ್ತಿದ್ದ ನನ್ನ ಮಗಳು ಇಷ್ಟೊಂದು ನೇರವಾಗಿ ಹೇಳುತ್ತಿದ್ದರೆ .., ಮೂಕವಾಗಿ ಕೇಳುವ ಸರದಿ ನನ್ನದಾಗಿತ್ತು . ಮಡದಿಯೊಂದಿಗೆ ಅಂದಿದ್ದೆ , ಕಾಲೇಜ್ ಡೇಸ್ ನಲ್ಲಿ  ಒಂದು ಹುಡುಗಿಗೆ ಲೈನ್ ಹಾಕ್ತ ಇದ್ದಿದ್ದೆ  ಕಣೆ... ' , ಅದಕ್ಕವಳು " ಅಯ್ಯೋ ಅವ್ಳಿನ್ನೇ ಮದುವೆಯಾಗೊದಲ್ವೇನ್ರಿ!! " ಅಂತ  ನಗೆಯಾಡಿದ್ದಳು .



         ಇವತ್ತು  ನನ್ನ ಮಗಳಿಗೆ  ಕೇಳಬೇಕಿದೆ , 'ಆತ  ಬದುಕಿನ ಭಾರವನ್ನು ತೆಗೆದುಕೊಳ್ಳಲು ತಯಾರಾಗಿರುವನಾ  ? ಅಥವ ನೀನು ನಕ್ಕ ನಗುವನ್ನು ಜೇಬಲ್ಲಿರಿಸಿಕೊಂಡು ಮುಂದೆ ನಡೆದುಬಿಡುತ್ತನಾ ?   ಕಾಲ , ಮನಸು ಎರಡೂ ಪಕ್ವವಾಗಿಲ್ಲದ ಕತೆಯನ್ನು ಆಕೆಗೆ ಹೇಳಬೇಕಿದೆ ನಾನು ..........


ಚೈತ್ರ  ಬಿ .ಜಿ.



         

Tuesday, October 2, 2012

ಹೇ ರಾಮ್ .....

        



  " ಮಹಾತ್ಮ ಗಾಂಧೀಜಿಯವರು 1869 oct  2 ಗುಜರಾತಿನ ಪೋರಬಂದರಿನಲ್ಲಿ  ಜನಿಸಿದರು , ಇವರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ", ನಾವು ಶಾಲಾದಿನಗಳಲ್ಲಿ   ಈ  ಸಾಲುಗಳನ್ನು  ಓದಿದಷ್ಟು  ಕೇಳಿದಷ್ಟು  ಇನ್ಯಾವ  ಸಾಲುಗಳನ್ನು  ಓದಿರಲಿಕ್ಕಿಲ್ಲ , ಕೇಳಿರಲಿಕ್ಕಿಲ್ಲ . ತಮಾಷೆಯೆಂದರೆ  ನಮಗೆ "ಸ್ವಾತಂತ್ರ್ಯ  ", ಹಾಗಂದರೇನು ಗೊತ್ತಿಲ್ಲ ," ದೇಶ?" ,   ಅದೂ ಗೊತ್ತಿಲ್ಲ , ಬಹುಷಃ ಸ್ವಾತಂತ್ರ್ಯವೆಂದರೆ , ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯಬೇಕಾದ ಒತ್ತಕ್ಷರದ ಕಷ್ಟದ ಒಂದು  "ಪದ ".  ಇನ್ನು ಗಾಂಧಿಜಯಂತಿ , ಸ್ವಾತಂತ್ರ್ಯ ದಿನಚರನಚರೆಯಂದು ನಮ್ಮ ಭಾಷಣ ಬೇರೆ :- " ಮಹಾತ್ಮ ಗಾಂದಿಜಿಯವರು 1969 ..... ರಿಂದ ಹಿಡಿದು ಅವರು ಸ್ವಾತಂತ್ರ್ಯ ತಂದುಕೊಟ್ಟರು" ಎನ್ನುವಲ್ಲಿಗೆ ಒಂದೇ ಉಸಿರಿಗೆ ಉಸುರಿ ಬರುತ್ತಿದ್ದೆವು .

            
              ಹೀಗೆಲ್ಲ ಯೋಚಿಸುತ್ತಿದಾಗ  ಗಾಂಧಿಜಿಯವರ  ತತ್ತ್ವಗಳ ಬಗ್ಗೆ   ನೆನಪಿಸಿಕೊಳ್ಳುವುದಕ್ಕೆ , ಯೋಚಿಸುವುದಕ್ಕೆ ಒಂದು ಅವಕಾಶವಾದಂತೆನಿಸಿತು .  ಅವರು ಪಾಲಿಸಿದ ತತ್ತ್ವಗಳ  ಬಗ್ಗೆ ಸಂಗ್ರಹಿಸಿ ಬರೆದ ಮಾಹಿತಿಗಳು ;
             
    ಸತ್ಯ
    
     "ನಿಜ " ಅಥವಾ" ಸತ್ಯ " ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವ" ರೇ ಸತ್ಯ ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು."ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.


ಅಹಿಂಸಾ

ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಅಹಿಂಸೆ  ಮತ್ತು ಪ್ರತಿರೋಧವಿಲ್ಲದಿರುವಿಕೆ ಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ. ಆತ್ಮಚರಿತ್ರೆಯಲ್ಲಿ  ಉಲ್ಲೇಖವಾದ ಅವರದ್ದೇ ಮಾತುಗಳು :-
"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸುತ್ತಾರೆ 
"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."
"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."

    ಸಸ್ಯಾಹಾರ ತತ್ವ
   ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಶಹಾರ ದ ಕಲ್ಪನೆಯು ಹಿಂದೂ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ. ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ . ಸಸ್ಸ್ಯಾಹರಿಯಾದರು ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತ
 
 ಬ್ರಹ್ಮಚರ್ಯೆ
   
ಸನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆ ಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು. ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತು ರಿಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.

ಸರಳತೆ

ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ  ನಡೆಸತಕ್ಕದ್ದು, ಇದು ಬ್ರಮ್ಮಚರ್ಯೇ ಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ
ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು. ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.
ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು  ತುಂಬಿಕೊಂಡಿದೆ ಎಂದು ಅವರು ನಂಬಿದ್ದರು. ಹಿಂದೂ ತತ್ವಗಳಾದ ಮೌನ  ಮತ್ತು ಶಾಂತಿ ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ 37ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
  
ಧರ್ಮಶ್ರದ್ಧೆ

ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನವುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. 

ಚೈತ್ರ  ಬಿ .ಜಿ . 
              

Wednesday, September 26, 2012

ಮಹಿಳೆ ..... ಸಾಧನೆಗೆ ಸವಾಲುಗಳ ಸರಮಾಲೆ :-

ಮಹಿಳೆ .....
 ಸಾಧನೆಗೆ  ಸವಾಲುಗಳ ಸರಮಾಲೆ :
 



ಆಕೆ :
      ಬೆಳಗ್ಗೆ 6  ಘಂಟೆಗೆ   ಏಳುತ್ತಾಳೆ,  ಕಾಫೀ ಮಾಡಿ ತಿಂಡಿ ರೆಡಿ ಮಾಡಿ ಮಧ್ಯಾನಕ್ಕೆ  ಲಂಚ್ ಬಾಕ್ಸ್  ರೆಡಿ ಮಾಡಿ, ಮಗುವನ್ನು ಎಬ್ಬಿಸಿ,  ಬೃಶ್  ಮಾಡಿಸಿ,  ಸ್ನಾನ ಮಾಡಿಸಿ ರೆಡಿ ಮಾಡಿ ಸ್ಕೂಲ್ ಬಸ್ ಹತ್ತಿಸಿ ತಾನು ಆಫೀಸ್  ತಲುಪಿಕೊಳ್ಳುವಷ್ಟರಲ್ಲಿ 10 ನಿಮಿಷ ಲೇಟ್ ಆಗಿಬಿಟ್ಟಿರುತ್ತದೆ,  ರಾತ್ರೆ ಬಂದು ಮತ್ತದೇ ಕೆಲಸ.. ಅಡಿಗೆ ....... ಮುಗಿಸುವಷ್ಟರಲ್ಲಿ  , ಮನಸು ದೇಹ ಎರಡೂ ದಣಿದಿರುತ್ತದೆ

 ಆತ :
 ಬೆಳಗ್ಗೆ ಎದ್ದು ತಿಂಡಿ ತಿಂದು ರೆಡಿ  ಆಗಿ ಆಫೀಸ್ ಸೇರಿಕೊಳ್ಳುವಷ್ಟರಲ್ಲಿ ಸಮಯ ಸರಿಯಾಗಿರುತ್ತದೆ, ಮತ್ತೆ ಆತ ರಾತ್ರೆ ಮನೆ ತಲುಪುವುದು ಇನ್ನು ಎಷ್ಟು ಹೊತ್ತಿಗೋ...
  
 ಇನ್ನು ಮಗು ಚಿಕ್ಕದಾದರೆ ಬೆಳಿಗ್ಗೆಯಿಂದ ಸಂಜೆಯವರೆಗೆ,  ' Day  Care '  ಸ್ಕೂಲ್ ಗೆ ಹೋಗುವ ಮಗುವಾದರೆ ಅಲ್ಲಿಂದ ಡೈರೆಕ್ಟ್ Day  Care  ಇನ್ನು ತಂದೆ ತಾಯಿಯಂದಿರಿಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಸಮಯವಾದರೂ ಎಲ್ಲಿ ?

          ಇದು ಬೆಂಗಳೂರು ಅಥವ ಇನ್ನಿತರ  ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.  


           ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹೆತ್ತವರ ಪಾತ್ರ ಅತೀ ಅಗತ್ಯ , ತಜ್ನ್ಯರ ಪ್ರಕಾರ ಮಗುವಿನ ಮಾನಸಿಕ ಬೆಳವಣಿಗೆಗೆ ತಾಯಿಯ ಪಾತ್ರ ಅತಿ ಮುಖ್ಯ . ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ನರಮಂಡಲ ವಿಕಸನ ಗೊಳ್ಳುತ್ತದೆ .  ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ  ಸಹಾಯವಾಗುತ್ತದೆ  . ತಂದೆ ತಾಯಿಯಿಂದ ದೂರವಿದ್ದು Day  Care  ಸೆಂಟರ್ ನಂಥ ಜಾಗದಲ್ಲಿ ಬೆಳೆಯುವ ಮಕ್ಕಳು ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ನ್ಯರ ಅಭಿಪ್ರಾಯ.  ಮುಂದುವರೆದ ನಗರಗಳಲ್ಲಿ ಅಷ್ಟೇ   ವೇಗವಾಗಿ ಚೈಲ್ಡ್  ಕೌನ್ಸಿಲಿಂಗ್ ಸೆಂಟರ್ ಗಳು ತಲೆ ಎತ್ತುತ್ತಿರುವುದೇ ಇದಕ್ಕೆ ಸಾಕ್ಷಿ ..

                ಅದೇ ವಾಸ್ತವತೆಯ ಅಡಿಯಲ್ಲಿ ಸಮಸ್ಯೆಯ ಇನ್ನೊಂದು ಮಗ್ಗುಲು ನೋಡುವದಾದರೆ ದಿನೇ ದಿನೇ ಏರುತ್ತಿರುವ ಜೀವನ  ನಿರ್ವಹಣೆಯ ಬೆಲೆ ,  'ಇಬ್ಬರು ದುಡಿದರೆನೆ ಬದುಕು '  ಎನ್ನುವಂಥಹ ಮಟ್ಟವನ್ನು ತಲುಪುತ್ತಿದೆ.  ಅದೇ ಮಗುವಿನ ಭವಿಷ್ಯದ ಭದ್ರತೆಗಾಗಿ,  ಬದುಕಿನಲ್ಲಿ ನೆಲೆ ಕಂಡುಕೊಳ್ಳುವಿಕೆಗಾಗಿ, ಉತ್ತಮ ಜೀವನ ನಿರ್ವಹಣೆಗಾಗಿ  ಉದ್ಯೋಗ  ಆಕೆಗೆ  ಅನಿವಾರ್ಯದ ಅಗತ್ಯವೇ ಆಗಿಬಿಟ್ಟಿದೆ.  ಓಡುತ್ತಿರುವ ಕಾಲದ ವೇಗಕ್ಕೆ ಹೊಂದಿಕೊಳ್ಳಬೇಕಿದೆ.
  

             ಇನ್ನೊಂದು ಮಗ್ಗುಲು:  ಆಕೆಯ ಬುದ್ದಿವಂತಿಕೆ, ಪ್ರತಿಭೆ, ಆಸಕ್ತಿ ಇಲ್ಲಿ ವಿಷಯವಾಗಿರುತ್ತದೆ . ಎಷ್ಟೋ ಕೋರಿಕೆಗಳು,  ಅದಿನ್ನೆಷ್ಟೋ ಆಸೆಗಳನ್ನು ಹೊತ್ತು,  ತನ್ನ ಗಮ್ಯದೆಡೆಗೆ  ದೃಷ್ಟಿ  ಇಟ್ಟು, ಶ್ರಮವಹಿಸಿ ಬೇಕೆಂದ ಗುರಿಯೆಡೆಗೆ ಆಗ ತಾನೇ ತಲುಪಿರುತ್ತಾಳೆ.  ಅಥವಾ  ತಲುಪುವ  ಹಂತದಲ್ಲಿರುತ್ತಾಳೆ.    ಕರ್ತವ್ಯ, ಜವಾಬ್ದಾರಿಯ ಮುಸುಕಿನೊಳಗೆ  ಆಕೆಯ ಕನಸನ್ನು ಚಿವುಟಬಹುದೇ?  ಆಕೆಯ ಅಪಾರ ಬುದ್ದಿ ಶಕ್ತಿ, ಪ್ರತಿಭೆ ಕೇವಲ ಒಗ್ಗರಣೆಯ ಚಿಟಪಟ ಸದ್ದಿನಲ್ಲಿ ಕಳೆದು ಹೋಗಬೇಕಿದೆಯೇ ?
 
             ಮಗುವಿನ ಬೆಳವಣಿಗೆಗೆ ಅಡ್ಡಿಯಾಗದಂತೆ,  ಸಂಸಾರಕ್ಕೆ ಸಾಥಿಯೂ  ಆಗುತ್ತಾ ...   ತನ್ನ ಪ್ರತಿಭೆ, ವ್ಯಕ್ತಿತ್ವದೊಂದಿಗೆ ಬೆಳೆಯುವ ಅನಿವಾರ್ಯತೆ ಇಂದಿನ ಮಹಿಳೆ ಎದುರಿಸಿತ್ತಿರುವ ಸವಾಲಾಗಿದೆ .. ಮತ್ತು ಮಹಿಳೆ  ಅದನ್ನು  ಸಮರ್ಥವಾಗಿ ನಿಭಾಯಿಸಿಕೊಂಡು  ಬರುತ್ತಿದ್ದಾಳೆ.  ಈ  ನಿಟ್ಟಿನಿನಲ್ಲಿ ಸಮಾಜ,   ಕುಟುಂಬ,  ಆಕೆಯ ಪತಿ   ಪ್ರತಿಯೊಬ್ಬರೂ ಆಕೆಗೆ ಬೆಂಬಲವಾಗಿ ನಿಲ್ಲಬೇಕಿದೆ  .


- ಚೈತ್ರ ಬಿ. ಜಿ. 


Sunday, September 16, 2012

ವಕ್ರತುಂಡ ಮಹಾಕಾಯ ....


                       
         
            ಅದೆಷ್ಟೇ ಹಬ್ಬಗಳಿದರೂ ಗಣಪತಿ ಹಬ್ಬಕ್ಕೆ ಏನೋ  ವಿಶೇಷತೆ ;  ಚಿಕ್ಕವವರಿದ್ದಾಗ ಹಬ್ಬಕ್ಕೆ 15 ದಿನದಿಂದಲೇ   ತಯಾರಿ  ನಡೆಸುತಿದ್ದೆವು .   ಅಪ್ಪ ಗಣಪತಿ ಹಬ್ಬಕ್ಕೆ ಹೊಸ ಬಟ್ಟೆ ತರುತ್ತಿದ್ದ  ವಾಡಿಕೆಯಿತ್ತು .  ಈ ಸಲದ ಹಬ್ಬಕ್ಕೆ ಯಾವ ಯಾವ ಪಟಾಕಿಗಳನ್ನು ತರಬೇಕೆಂದು ಅಪ್ಪನೊಂದಿಗೆ ಮುಂಚೆಯೇ ಚರ್ಚಿಸುತ್ತಿದ್ದೆ .  ಗಣಪತಿಯನ್ನು ಈ ಸಲ ಎಲ್ಲಿಂದ ತರಬೇಕು ಯಾರಿಂದ ಕೊಂಡುಕೊಳ್ಳಬೇಕೆಂದು ಮನೆಯಲ್ಲಿ ಚರ್ಚೆಯಾಗುತ್ತಿತ್ತು . ಗಣಪತಿ ಹಬ್ಬದಂದು ಅಂತ ವಿಶೇಷತೆ ಇಲ್ಲದಿದ್ದರೂ ನಮ್ಮ ಮನೆಯಲ್ಲಿ ಪಂಚಮಿಯಂದು  ವಿಶೇಷ ಸಂಬ್ರಮವಿರುತ್ತಿತ್ತು . ಪಂಚಮಿಯೊಂದಿಗೆ ಗಣಹೊಮ  ಸತ್ಯನಾರಾಯಣ ಪೂಜೆ ಗೆ  ಊರವರು ನೆಂಟರ ಜೊತೆಯಿರುತ್ತಿತ್ತು . ಪಂಚಮಿಯ ದಿನ ಪಟಾಕಿಯ ಹಂಚಿಕೆಯಾಗುತ್ತಿತು .., , ಮನೆಮಂದಿಗೆ, ಬಂದ ಮಕ್ಕಳಿಗೆ , ಅದಕ್ಕಾಗೆ ಕಾಯುತ್ತಿರುವ ಆಳುಗಳಿಗೆ ಹಂಚಬೇಕಾಗಿತ್ತು . ಪಟಾಕಿ ,ಜಾಗಟೆ  ಸದ್ದು ,ಆರತಿ ,ಒಂದಷ್ಟು ಬಳೆ ಶಬ್ದ , ಯಾರಿದ್ದೋ ಕಾಲ್ಗೆಜ್ಜೆ ಸದ್ದು , ಸೀರೆಯ ಸರಪರ ,  .., ಜೊತೆಗೆ ಸಾಮಾನ್ಯವಾಗಿ ಇರುತ್ತಿದ್ದ ಜಿಮುರು ಅಥವ ಜೊರು ಮಳೆ ....ಇವೆಲ್ಲ ಸೇರಿದರೆ ಅದು ಗಣಪತಿ ಹಬ್ಬವಾಗುತ್ತಿತು

           ಇದೆಲ್ಲ ನೆನಪಾಗಿದ್ದು  ಮೊನ್ನೆ ನಮ್ಮ ಮನೆಗೆ ಗಣಪತಿ ಹಬ್ಬಕ್ಕೆ ಚಂದ ಎತ್ತಲು ಬಂದ ಹುಡುಗನ್ನನ್ನು ನೋಡಿ , ಹಾಗೆ ಬಂದವರಲ್ಲಿ  ಈತ ಮೂರನೆಯವನು!  ಬೆಂಗಳೂರಿನಲ್ಲಿ ಗಣಪತಿ ಹಬ್ಬವೆಂದರೆ ರಸ್ತೆಗೊಂದು ಗಣಪತಿ!  ಬ್ಯಾಂಡು! ಡೋಲು!  ಟ್ರಾಫಿಕ್ ಜಾಮು!   ಪಡ್ಡೆಗಳ ಹುಚ್ಚುಚ್ಚು  ಕುಣಿತ !   ಹಳೆಜನ್ಮದ ವೈರಿ ಎನಿಸುವ ಮೈಕು!  ಪ್ರಾಣಹಿಂಸೆ ನೀಡುವಷ್ಟು ಕೆಟ್ಟದಾದ ಅರ್ಕೆಷ್ಟ್ರ!  ಪ್ಯಾರಗೆ ಆಗಬಿತ್ತೈತೆ  ..,  ಎನ್ನುವಂತ ಹಿಂದೂ ಮುಂದಿಲ್ಲದ ಹಾಡು !  ಅಲ್ಲ .. ಗಣಪತಿ ಹಬ್ಬಕ್ಕೂ .., ಆ ಹಾಡಿಗೂ ಏನು ಸಂಬಂದ  ? ಅರ್ಕೆಷ್ತ್ರದಾಣೆಗೂ ಅರ್ಥವಾಗದ ವಿಷಯ !!

         ಬೆಂಗಳೂರಿನಲ್ಲಿ ರಸ್ತೆಗೊಂದು ಗಲ್ಲಿಗೊಂದರಂತೆ ಗಣಪತಿ ಮೂರ್ತಿಯನ್ನು ಕೂರಿಸುತ್ತಾರೆ .  ಇಂತ ಗಣಪತಿ ಮೂರ್ತಿಯನ್ನು ತಯಾರಿಸಲು ಬಳಸುವ ಬಣ್ಣವು  ತುಂಬಾ  ಹಾನಿಕಾರಕ chimicals ನು ಒಳಗೊಂಡಿರುತ್ತವೆ . ಇಂತ  ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ . ಅದು  ತುಂಬಾ ಅಪಾಯಕಾರಿ . ಸರಕಾರ ಏನೇ ಹೇಳಿದ್ದರೂ  ಕೂಡ ಅದು ಕಾರ್ಯರೂಪಕ್ಕೆ ಬಂದಿದೆಷ್ಟು ಎಂಬುದು ಮಾತ್ರ ನಮಗೆಲ್ಲ ಗೊತ್ತಿರುವ ವಿಷಯ . ಈ ಸಲ ಗಣಪತಿ  ಹಬ್ಬಕ್ಕಾದರೂ ನೀರಿನಲ್ಲಿ ಗಣಪತಿ ವಿಸರ್ಜನೆಯನ್ನು ಸರಕಾರ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.....,  ಒಂದು ನಗರ ಅಥವಾ ಒಂದು ಏರಿಯಕ್ಕೆ ಇಂತಿಷ್ಟೇ ಗಣಪತಿ ಎಂಬ ಪರಿಮಿತಿಯಿಡಬೇಕು....., ಅಷ್ಟೇ ಅಲ್ಲ ...  ಗಣಪತಿ ಹಬ್ಬದ ಆಚರಣೆಗೆ ಕೇವಲ 3 ದಿನವನ್ನು ಮಾತ್ರ ಸೀಮಿತಗೊಳಿಸಬೇಕು ....., ಹಮ್ಮ್ .., ಬೇಕುಗಳ ಪಟ್ಟಿ ಸ್ವಲ್ಪ ದೊಡ್ಡದಾಯೈತೆನೋ ......

                 ಹಬ್ಬಕ್ಕೆ ಊರಿಗೆ  ಹೊರಟವರಿಗೆ ಉಂಡೆ ಕಾಯಿಕಡಬು   ಕಾಯುತ್ತಿರಬಹುದು ,  ಇಲ್ಲೇ ಇರುವವರು  ಆರ್ಕೆಷ್ಟ್ರದೊಂದಿಗೆ  ಹಬ್ಬವನ್ನು ಎಂಜಾಯ್  ಮಾಡಬಹುದು ...!!   ಎಲ್ಲರಿಗೂ ಗಣಪತಿ ಹಬ್ಬದ ಶುಭಾಷಯಗಳು !!
                

            

      

Wednesday, September 12, 2012

ಅಡಿಕೆಗೆ ಸಿಕ್ಕ ಮಾನ




ಮಲೆನಾಡು , ಉತ್ತರ ಕನ್ನಡ , ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರ ಮುಖದ ಮೇಲೊಂದು
ಮುಗುಳುನಗು ತಂದ ವಿಷಯವೆಂದರೆ ಈ ಸಲದ ಬೆಳೆಗೆ ಬಂದ ಒಳ್ಳೆಯ ಧಾರಣೆ . ಈ ಸಲ ಅಡಿಕೆ
ಬೆಳೆಗಾರರು ಅಡಿಕೆ ಬೆಳೆಗಾಗಿ ಪಟ್ಟ ಬವಣೆ ಅವರಿಗಷ್ಟೇ ಗೊತ್ತು . ಕೂಲಿಕೆಲಸಗಾರರ
ಅಭಾವ ಆ ಮಟ್ಟಕ್ಕೆ ತಲುಪಿಯಾಗಿದೆ .


ಹಳ್ಳಿಗಳಲ್ಲಿರುವ ಕೂಲಿಕೆಲಸಗಾರರು ಹೋಟೆಲ್ ಮತ್ತು
ಇನ್ನಿತರ ಕೆಲಸ ಅರಸಿಕೊಂಡು ಬೆಂಗಳೂರು ಬಸ್ಸ ಹತ್ತಿಯಾಗಿದೆ ! ಉಳಿದಿರುವ ಕೆಲಸಗಾರರೂ
ತೋಟದ ಕೆಲಸ 'ತಾ ಒಲ್ಲೆ ' ಎಂದು ಪ್ಯಾಂಟು ಏರಿಸಿ ಹತ್ತಿರದ ಚಿಕ್ಕ ಪುಟ್ಟ
ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ .ಇವರು ತೋಟದ ಕೆಲಸದತ್ತ ಒಲವು ತೋರುವ ಯಾವುದೇ
ಲಕ್ಷಣಗಳು ಕಾಣುತ್ತಿಲ್ಲ . ದೊಡ್ಡ ಮೊತ್ತ ಕೊಟ್ಟೋ.., ಅಥವ ಬೇರೆ ಇನ್ನೆಲ್ಲಿಂದಲೋ
ಕೂಲಿಯಳುಗಳನ್ನು ತಂದು ಕೆಲಸ ಮಾಡಿಸುವುದು ತೋಟದ ಯಜಮಾನನಿಗೊಂದು ಸವಾಲಿನ ಕೆಲಸವೇ
! ಅದೂ ಕೂಡ ಅವರು ಹೇಳಿದ್ದೆ ರೇಟ್! ಬಂದಿದ್ದೆ ಟೈಮ್ ! ಮಾಡಿದಷ್ಟೇ ಕೆಲಸ!!..
ಅಪ್ಪಿತಪ್ಪಿ ' ಏನಪ್ಪಾ ಇದು ಯಾಕಪ್ಪ ಹೀಗೆ ಎಂದು ಕೇಳಿದಿರೋ ..., ಅಷ್ಟೇ ,ಅವನು rite !
ನಾಳೆಗೆ ಅದೂ ಇಲ್ಲ ! ಅಡಿಕೆ ಕೊಯ್ಯಲು ಜನರ ಅಭಾವ ! ಹಗ್ಗ ಹಿಡಿಯಲು ಅಭಾವ ! ಅಡಿಕೆ
ಹೆಕ್ಕುವರಿಲ್ಲ ! ಮನೆಗೆ ಸಾಗಿಸುವರಿಲ್ಲ ! ಅಡಿಕೆ ಸುಲಿಯುವರಿಲ್ಲ ! ಬೇಯಿಸಿ...
ಣಗಿಸಿ .. ಇಲ್ಲ.. ಇಲ್ಲ..ಇಲ್ಲ
ಈ ಸಮಸ್ಯಗಳಿಗೆ ಪ್ರಕ್ರತಿ ಮತ್ತು ಕಾಲವೇ ಉತ್ತರಿಸಬೇಕೆನೋ .., ,
ಆದರೆ ಈ ಸಲ ಅಡಿಕೆ ಬೆಳೆಗಾರನ ಶ್ರಮಕ್ಕೋ ಏನೋ ಎಂಬಂತೆ ಧಾರಣೆಯಲ್ಲಿ ಕೊಂಚ ಏರಿಕೆ
ಕಂಡು ಬರುತ್ತಿದೆ . ಆದ್ರೆ ಮದ್ಯಸ್ಥಿಕೆ , ಸಾಗಣೆ ಮುಂತಾದ ಯಾವುದೇ ಬಾದೆ ಅಡಿಕೆ
ಬೆಳೆಗಾರನಿಗೆ ತಾಕದಿರಲಿ . ಎಲ್ಲ ಸ್ಥಳೀಯ ಹಾಗೂ ಚಿಕ್ಕ ದೊಡ್ಡ ಪ್ರತಿಯೊಬ್ಬ
ಬೆಳೆಗಾರನಿಗೂ ನ್ಯಾಯುತವಾದ ಬೆಲೆ ಸಿಗುವಂತಾಗಲಿ
ಚೈತ್ರ B .G . 

(ಇಕನಸು.ಕಾ o . ನಲ್ಲಿ ಪ್ರಕಟ ) 

Thursday, September 6, 2012

ಕನಸು ಕಾಣುವ ಕಣ್ಣಿಗೆಕೋ ಕಣ್ಣೀರಿನ ಪೊರೆ........




                 
                          ಮೊಸರನ್ನ ಕಲೆಸಿದ ನನ್ನ ಕೈಗೆ ಅಂಟಿದ ನಿನ್ನ ಮಮತೆ ತುಂಬಿದ  ಮನಸ್ಸಿನ ನೆನಪು ..., ಜೊತೆಗೆ ತುಂಬಿ ಬಂದ ಕಣ್ಣೀರು .. ಮೊಸರನ್ನಕ್ಕೆ ಕಣ್ಣೀರು ಸೇರಿ ಸ್ವಲ್ಪ ಉಪ್ಪು ಹೆಚ್ಚಾಯಿತೇನೋ ..., ಹಾಗನೆಸಿ ಅರ್ದಕ್ಕೆ ಬಿಟ್ಟ ನನ್ನ ಊಟ..., ಕಿಟಕಿಯಾಚೆ ಕಣ್ಣು ಹೊರಳಿಸಿದರೆ ಬೀಳುತ್ತಿದ್ದುದು ಮಳೆಯ ಹನಿಗಳಾ..?  ಅಥವ ನನ್ನದೆಗೆ ನೆರವಾಗಿ ಬೀಳುತ್ತಿದ್ದ ನಿನ್ನ ನೆನಪುಗಳಾ ...? ಅನುಮಾನ ನನಗೆ ..!

                          ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕ ? ಅದು ಅಗತ್ಯತೆಯ ? ಹಂಚಿ ತಿಂದ ಪಾನಿಪುರಿ, ಪಾರ್ಕಿನಲ್ಲಿ ಕೂತ ಕಲ್ಲು ಬೆಂಚು, ರಸ್ತೆ ಬದಿಯ ಸುಟ್ಟ ಜೋಳದ  ಸಾಕ್ಷಿಯಾಗಿ ಮನಸ್ಸು ದಿಗಿಲಿಡುತ್ತಿದೆ. ಆ ಬಸ್ ಸ್ಟಾಪ್ ಗಳು , ಸಿಟಿ ಬಸ್ ಗಳು shoping complex .., ಒಹ್... ಯಾಕೋ ಎಲ್ಲದಕ್ಕೂ ನಿನ್ನ ನೆನಪಿನದ್ದೇ ಹೊದಿಕೆ .., ಗೆಳತಿ treet  ಕೊಟ್ಟ ಪಿಜ್ಜಾದಲ್ಲೂ ಅವತ್ತು ನೀನು ಮುನಿದ ನೆನಪು, ಸಿನಿಮ ಹಾಲ್ ನಲ್ಲಿ ಪೋಪ್ ಕಾರ್ನ್ ನೊಂದಿಗೆ ಬೆರೆತ ನಿನ್ನ ನಗುವಿನ ನೆನಪು, ನನ್ನ ಸೆಲ್ ಫೋನ್ ನನ್ನು ಗೋಡೆಗೆ ಅಪ್ಪಳಿಸಿ ಬಿಡುವಷ್ಟು ಕೋಪ ನನಗೆ, ooff !! ಯಾಕೋ ಸಂಬಂದದ ಬೇರು ಆಳಕ್ಕಿಲಿದಿದೆಯೇ? ಹೌದು ಅನ್ನುತ್ತಿದೆ ಮನಸ್ಸು !!

               ಇಬ್ಬರೂ ಸೇರಿ ಕಂಡ ಕನಸಿನ ಲೆಕ್ಕ ಸರಿಯಾಗಿ ಆಕಾಶದ ನಕ್ಷತ್ರಗಳಷ್ಟು, ರೆಪ್ಪೆ ಮಿಟುಕುವಷ್ಟೇ ಸಮಯಕ್ಕೊಂದು ನಗು ತುಂಬಿಕೊಳ್ಳುತ್ತುದ್ದುದು ಬರಿ ತುಟಿಯನ್ನಷ್ಟೇ ಅಲ್ಲ  .. ಹ್ರದಯವನ್ನೂ .., ತುಂಬಾ ಜಾಸ್ತಿ ಮಾತಾಡುವ ನಾನು, ಮುಗುಳ್ನಗುವಿನಲ್ಲೆ ಹೆಚ್ಚು ಮಾತಾಡುವ ನೀನು ಮತ್ತು ನೀನು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆಯೋ    ಇಲ್ಲವೋ  ಅನ್ನುವ ನನ್ನ ಅನುಮಾನಕ್ಕೆ ಹುಟ್ಟಿಕೊಳ್ಳುತ್ತಿದ್ದ ನನ್ನ ಪ್ರಶ್ನೆಗಳು ! ಎಲ್ಲದಕ್ಕೂ ಲೆಕ್ಕವಿಡುತ್ತಿದ್ದ ನಾನು, ಮತ್ತು ಬೇಕೆಂತಲೇ ಲೆಕ್ಕ ತಪ್ಪುತ್ತಿದ್ದ ನೀನು ಮತ್ತು ನಿನ್ನ ತುಂಟತನ ..

              ತುಂಬ  ಒಳ್ಳೆ ಹುಡುಗ ನೀನು; ಅನುಮಾನವಿಲ್ಲ,  ಸಭ್ಯ; ಮಾತಿಲ್ಲ ,  ವಿದ್ಯಾವಂತ  ; ಮೆಚ್ಚುಗೆಯೇ ,   ಬುದ್ದಿವಂತ ; ಒಪ್ಪಿಗೆಯೇ .., 
  ಎದ್ದು ಹೊರಕ್ಕೆ ಹೋಗೋಣವೆಂದು ಸ್ಕೂಟ ಕೀ ಗೆ ಕೈ ಹಾಕಿದರೆ ನೀನು ಕೊಟ್ಟ ಕೀ ಬಂಚ್ ನಗುತ್ತಿತ್ತು. ಬಿಸಾಕಿ ತಣ್ಣಗೆ ಕೂತು ಯೋಚಿಸಿದೆ, 5 ವಸಂತಗಳ  ನಮ್ಮ  ಸಂಬಂದವನ್ನು  ನಾನು  ಕೊನೆಗೊಳಿಸಿಕೊಳ್ಳುವಾಗ   ನಿನಗೆ  ಕೊಟ್ಟ  ಕಾರಣವಾದರೂ ಏನು?, "ನಮ್ಮ    ಮದುವೆಗೆ  ಅಪ್ಪ  ಅಮ್ಮ  ಒಪ್ಪುವುದಿಲ್ಲ  ಅವರನ್ನು  ಬಿಟ್ಟು  ನನಗೆ  ಬದುಕುವುದಕ್ಕೆ  ಆಗೋದಿಲ್ಲ! ", ಒಣ  ನಗೆಯೊಂದು  ನನ್ನ  ತುಟಿಯ  ಮೇಲೆ! , ನಾನು  ನಿನ್ನೊಂದಿಗೆ  ಹೇಳಿದ್ದು  ನಿಜವನ್ನ  ? ಕೊಂಚ  ಹಠ   ಹಿಡಿದ್ದಿದ್ದರೆ ಅಪ್ಪ  ಅಮ್ಮ  ಒಪ್ಪುತ್ತಿದ್ದರು   ಅದು  ಸಮಸ್ಯೆ  ಅಲ್ಲ, ಅವರು  ನನ್ನ   ಅಪ್ಪ  ಅಮ್ಮ;  ಅವರನ್ನು  ಒಪ್ಪಿಸುವುದು  ಹೇಗೆಂದು ನನಗೆ  ತುಂಬಾ  ಚೆನ್ನಾಗಿ  ತಿಳಿದ್ದಿತ್ತು,  ಹಠದ    ಮಗಳು  ನಾನು, ಚಿಕ್ಕಂದಿನಿದಲೂ  ನನಗೆ   ಬೇಕಾದನ್ನು   ಪಡೆಯುವುದು   ಹೇಗೆಂದು  ನನಗೆ  ಚೆನ್ನಾಗಿ  ತಿಳಿದಿತ್ತು . ಹಮ್ಮ್.... ನನ್ನ ನಿಟ್ಟುಸಿರಿನ ಗಾಳಿ ತುಂಬ ಬಿಸಿಯಾದಂತೆನಿಸಿತು.    
   
           ಕಣ್ಣು ಕೈಯಲ್ಲಿದ್ದ appointment ಲೆಟರ್ನತ್ತ  ಹೊರಳಿತು ..,ಮನಸ್ಸು 5 ವಸಂತಗಳ ಆಚೆಗೆ ...,   ಬೆಂಗಳೂರಿಗೆ ಆಗ ತಾನೆ ಬಂದ ನಾನು ಮೊದಲ ವರ್ಷದ engneering ಗೆ ಸೇರಿದ್ದೆ. campus selection, ಒಳ್ಳೆ ಕೆಲಸ .., ಒಳ್ಳೆ ಸಂಬಳ ., ೧ ವರ್ಷದ ನಂತರ  US ನಲ್ಲಿ MS ಮಾಡಲು ಅವಕಾಶ ಸಿಕ್ಕಿತ್ತು , ನನ್ನ ಮಹತ್ಹ್ವಕಾಕ್ಷೆ ಈಡೆರುವುದಿತ್ತು. ನಾನು ಚಿಕ್ಕಂದಿನಿಂದ ಕಂಡ ಕನಸು ನನಸಾಗುವುದಿತ್ತು, ಇಂಥ ಅವಕಾಶವನ್ನು ಕಳೆದುಕೊಳ್ಳಲು ಸುತರಾಂ ನನಗೆ ಇಷ್ಟವಿರಲ್ಲಿಲ್ಲ , ಮನಸ್ಸು ಆಕಾಶದ ಎತ್ತರವನ್ನು  ಲೆಕ್ಕಾಚಾರ ಹಾಕುತ್ತಿದೆ .., ಸಾಗರ ಸಾಗರಗಳ ಅಂತರವನ್ನು ಅಳೆಯಬೆಕೆನಿಸಿದೆ, ಪ್ರಪಂಚದ ವೈಶ್ಯಾಲ್ಯಕ್ಕೆ ನನ್ನನು ನಾನು ತೆರೆದುಕೊಳ್ಳಬೇಕಿದೆ ..., ಹಮ್ಮ್ ಅದರ ನಿಜವಾದ ಅರ್ಥ ನಿನಗೆ ಮೋಸ ಮಾಡಬೇಕಿದೆ ಅಂತಾನ? ನಾನೇನೆ ಅಂದುಕೊಂಡರೂ ನಿನಗೆ ಆಗಿದ್ದು ಮೊಸನೆ .... , ನನ್ನ ಮನಸ್ಸು ಸಮೀಕರಿಸಿಕೊಂಡಿತ್ತು..., ನಿನ್ನ ಸೀಮಿತ ವ್ರತ್ತಿ ಜಗತ್ತು  ನನ್ನ ವಿಶಾಲ ಜಗತ್ತಿಗೆ ಬೇಲಿಯಾಗಿತ್ತು. ನನ್ನ 2 ವರ್ಷ MS ಮತ್ತು ಅಲ್ಲಿ ಒಂದು ವರ್ಷದ ಕೆಲಸ ಬೇರೆಯದೇ ಜಗತ್ತಿಗೆ ಪರಿಚಯಿಸಿತ್ತು .., 3 ವರ್ಷಗಳ  ನಂತರವೂ  ನಿನ್ನ ಪ್ರೀತಿ , ನಿಷ್ಠೆ ಬಹುಷಃ ಹೀಗೆ ಇರುತ್ತಿತ್ತು , ಬದಲಾಗುತ್ತಿದುದು ನನ್ನ ಪ್ರಪಂಚ ಮಾತ್ರ ....

         ಕೆಟ್ಟ ವಿಷಾದ ನನ್ನಲಿ .., ನಮ್ಮ ಕೊನೆಯ ಬೇಟಿಯಲ್ಲಿ  ಕೊನೆಯ ಮಾತು " ನನಗಿಂತ ಒಳ್ಳೆಯ ಹುಡುಗಿ ಸಿಗುತ್ತಾಳೆ ಬಿಡು ", ಅದು ನನ್ನ ಬಾಯಿಂದ ಬಂದ ಮಾತು ," ನನ್ನ ಥರ carreer oriented ಹುಡುಗಿಯನ್ನು ಪ್ರೀತಿಸುವಂತ ತಪ್ಪನ್ನುಮಾತ್ರ ಯಾವತ್ತೂ  ಮಾಡಬೇಡ ", ಅದು ನಾನು ಎಂದೂ ಹೇಳಲಾಗದ ನನ್ನ ಮನಸಿನ ಮಾತು.


           ಕಣ್ಣೀರಿನೊಂದಿಗೆ ಬೆರೆತ ಅಕ್ಷರಗಳು.. ತುಂಬಿದ ಕಣ್ಣುಗಳಿಗೆ ಇನ್ನೂ ಅಸ್ಪಷ್ಟ .., ಲಗ್ಗೆಜೆ ಪ್ಯಾಕ್ ಆಗಿದೆ , ಪಕ್ಕದ್ಮನೆ ಅಂಕಲ್ ಕೊಟ್ಟ WM ನಿಂದ weight ಚೆಕ್ ಮಾಡಿದ್ದೂ ಆಯಿತು .., ಕೇವಲ 12 ತಾಸು ಬಾಕಿ ನಾನು ಹೊರಡುವುದಕ್ಕೆ .., ಈ ಲೆಟರ್ ಖಂಡಿತ ನಿನಗೆ ಕೊಡುವುದಕ್ಕಲ್ಲ, ನನ್ನ ಮನಸ್ಸಿನ ದುಗುಡ ದುಮ್ಮಾನವನ್ನು ಕಡಿಮೆಯಾಗಿಸಲು .., ವಿಮಾನದಲ್ಲಿ ಕುಳಿತ ನಾನು , ಈ ಲೆಟರ್ ನ್ನು  ಮತ್ತು ನಿನ್ನ ನೆನಪನ್ನು ಚೂರು ಚೂರು ಮಾಡಿ ಕಿಟಕಿಯಾಚೆಗೆ ಎಸೆದು   ...,  ನನ್ನ ಪ್ರಯಾಣವನ್ನು  ನಿನ್ನ ನೆನಪಿನ ಹಂಗಿಲ್ಲದೆ ಮುಂದುವರೆಸುತ್ತೇನೆ ...

   
          ಹೌದೂ ...., ವಿಮಾನಕ್ಕೆ ಕಿಟಕಿಗಲಿರುತ್ತವ  ? ಅಥವಾ ವಿಮಾನಕ್ಕೆ ಮನಸ್ಸಿಗೆ  ಕಿಟಕಿಗಳು ಇಲ್ಲದೆ
ಈ ಲೆಟರ್ ಮತ್ತು ನಿನ್ನ ನೆನಪನ್ನು ಹಾಗೆ  ಇಟ್ಟುಕೊಂಡು ಬಿಡುತ್ತೇನ ?



          












Thursday, August 16, 2012

ಸತ್ಯಮೇವ ಜಯತೆ - ಹೀಗೊಂದು ಅನಿಸಿಕೆ

Posted by ekanasu
ಯುವಾ...

ಜನಪ್ರಿಯ ಜನಹಿತ ಕಾರ್ಯಕ್ರಮವಾಗಿ ಮೂಡಿಬರುತ್ತಿರುವ 'ಸತ್ಯಮೇವ ಜಯತೆ ', ಯ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ . ಒಳ್ಳೆಯ ಪರಿಕಲ್ಪನೆ, ಉದ್ದೇಶ ಹೊಂದಿರುವ ಕಾರ್ಯಕ್ರಮ ಸ್ವಾಗತಾರ್ಹ. ಕಳೆದ episode ನಲ್ಲಿ ಅಮೀರ್ ಖಾನ್ ನಡಿಸಿಕೊಟ್ಟ "is love a crime " ತಲೆ ಬರಹದಡಿಯಲ್ಲಿ ಕಾರ್ಯಕ್ರಮ ಯೋಚಿಸಲರ್ಹವಾಗಿತ್ತು." ಪ್ರೇಮ ವಿವಾಹದ", ಸುತ್ತ ಮುತ್ತ ಎಳೆ ಎಳೆ ಯಾಗಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಅನೇಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ . ಪ್ರೇಮ ವಿವಾಹಿತರ ತಂದೆ ತಾಯಿಗಳಿಗೆ ಅವರನ್ನು ಆಶೀರ್ವಾದಿಸುವಂತೆ ಮನವಿಸಿಕೊಂಡಿದ್ದಾರೆ.

ಸರಿಯೇ, ತಪ್ಪೇನೂ ಇಲ್ಲ ... ಆದರೆ ಅಮೀರ್ ಖಾನ್ ರವರು ಪ್ರೇಮ ವಿವಾಹದ ಕೇವಲ ಒಂದು ಮುಖವನ್ನು ಪರಿಚಯಿಸಿದ್ದಾರೆ . ಇಬ್ಬರು ಪ್ರಬುದ್ದ ಜವಾಬ್ದಾರಿಯುತ ವ್ಯಕ್ತಿಗಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವುದು , ಆಗು ಹೋಗುಗಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ,ಒಳ್ಳೆಯ ಆರೋಗ್ಯವಂತ ಪರಿಸರ ಸಮಾಜ ನಿರ್ಮಾಣಕ್ಕೆ ಸಹಾಯಕವೇ .ತಂದೆ ತಾಯಿ ,ಸಮಾಜ ಸಣ್ಣ ಪುಟ್ಟ ವಿರೋದ ಸಹಜವೇ , ಪ್ರೇಮಿಗಳು ಜವಾಬ್ದಾರಿಯುತವಾಗಿ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಧೃಡವಾದ ಸಮತೋಲನ ವ್ಯಕ್ತಿತ್ವ ,ಬಾಂಧವ್ಯ ಹೊಂದಿದಾಗ ಕಾಲಾಂತರದಲ್ಲಿ ಎಲ್ಲರಿಂದಲೂ ಒಪ್ಪಲ್ಪಡುತ್ತದೆ...ಗೌರವಿಸಲ್ಪಡುತ್ತದೆ ಅಂತ ಎಷ್ಟೋ ಉದಾಹರಣೆಗಳು ಕಂಡುಬರುತ್ತವೆ.

ಆದರೆ ...
ಬದುಕಲ್ಲಿ ನೆಲೆಗೊಳ್ಳುವ ಮೊದಲೇ , ಜವಾಬ್ದಾರಿಯನ್ನು ಆರಿಯುವ ಮೊದಲೇ , ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಮೊದಲೇ , ಪ್ರಪಂಚದ ವಾಸ್ತವತೆಯನ್ನು ಅರಿಯುವ ಮೊದಲೇ ಕೇವಲ ಭಾವೋನ್ಮಾದದ ಆಧಾರದ ಮೇಲೆ ಕಟ್ಟಿಕೊಳ್ಳುವ ಸಂಬಂಧಗಳ ಆಯುಷ್ಯ ತೀರ ಕಡಿಮೆ . ತನ್ನ ಅಭಿರುಚಿ , ತನ್ನ ಗುರಿ ,ತನ್ನ ಕನಸು,ತನ್ನ ಮೌಲ್ಯಗಳು ಬದುಕಿನೆದೆಗಿನ ತನ್ನ ದೃಷ್ಟಿಕೋನ ಯಾವೂದನ್ನೂ ಯೋಚಿಸದೆ ಕೇವಲ ಪ್ರೇಮ ,ಭಾವೋನ್ಮಾದ, ಆಕರ್ಷಣೆ ಎಳೆಯಲ್ಲಿ ಸಿಕ್ಕಿಕೊಳ್ಳುವ ಪ್ರೇಮ ಕಾಲಾಂತರದಲ್ಲಿ ಉನ್ಮಾದ ಕಳಚುತ್ತ , ಬಾಂಧವ್ಯ ಸಡಿಲಿಸುತ್ತ ಮನಗಳು ಮದುವೆಗಳು ಮುರಿಯುವತ್ತ ಹೆಜ್ಜೆ ಹಾಕುತ್ತವೆ .

" ಬದುಕಲ್ಲಿ ನೆಲೆಗೊಳ್ಳುವ ಮೊದಲೇ ವಿವಾಹದ ವಿಷಯದಲ್ಲಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಮೊದಲು ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ , ನಿಮ್ಮ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಿ ,ತುಂಬಾ ಕಾಲಾವಕಾಶ ತೆಗೆದುಕೊಳ್ಳಿ , ಕಾಲಕ್ಕಿಂತ ಪರೀಕ್ಷೆ ಮತ್ತೊಂದಿಲ್ಲ , ಇಷ್ಟಾದ ಮೇಲೂ ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸುತ್ತಿದ್ದರೆ , ಮದುವೆಯಾಗಲೂ ನಿರ್ಧರಿಸಿದರೆ go ahead !" ಅನ್ನುವ ತರದ ಸಂದೇಶವನ್ನು ಅಮೀರ್ ಖಾನ್ ರವರು ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು .
ಕೊನೆಯಲ್ಲಿ... ಪ್ರೇಮ " crime " ಅಲ್ಲದಿರಬಹುದು , ಆದರೆ ದುಡುಕಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬದುಕನ್ನೇ "crime " ಆಗಿಸಬಹುದು .

ಚೈತ್ರ ಬಿ.ಜಿ.

(ನನ್ನಈ  ಪುಟ್ಟ ಲೇಖನ "ಈ ಕನಸು.ಕಾಮ್ " ನಲ್ಲಿ ಪ್ರಕಟವಾಗಿದೆ )

7 comments:

Anonymous said...
Chittaranjan Das - In North India... love marraige is crime.. own father kills his daughter and announces it is honour killing.. in Bangalore lover marraige hesarinalli muslim hudugaru namma hudugirige mosa maaduttiddare.. That is why this is now became hot issue in the country