ಬೇಡವೆಂದರೂ ಬರುವ ನೆನಪುಗಳು ಸುಮ್ಮನಿರಲು ಏನು ಮಾಡಬೇಕು ...? ಹಾಗಲ್ಲ... ಪ್ರಯತ್ನ ಮಾಡಿದಷ್ಟೂ ಹೆಚ್ಚು ಕಾಡುವ ನೆನಪುಗಳು ಥೇಟ್ ರಚ್ಚೆ ಹಿಡಿದ ಮಗುವಿನಂತೆ ; ಮಾತು ಕೇಳಲು ಸುತರಾಂ ಒಪ್ಪದು ! ಬರಿದೆ ಕಾಡುವ ನೆನಪುಗಳಲ್ಲಿ ಏನೂ ಇಲ್ಲ ! ಇವತ್ತಿಗೂ ಗೊತ್ತಾಗುತ್ತಿಲ್ಲ ನಾನು ಮಾಡಿದ್ದು ಸರಿಯ ? ತಪ್ಪಾ ? ಮರಳು ನನಗೆ! ತಪ್ಪು ಸರಿಗಳ ಎಲ್ಲೆ ದಾಟಿ ಬಹಳ ದೂರ ಬಂದದ್ದಾಗಿದೆ ! ಈಗೇನು ಹುಚ್ಚು ವಿಮರ್ಶೆ ನನ್ನದು ! ಅಪ್ಪ, ಅಮ್ಮ ಅಣ್ಣ , ಅಜ್ಜಿ , ಮನೆ ಊರು ಸರ್ವಸ್ವವನ್ನು ಬಿಟ್ಟು ಬರಲು ನನಗೆ ಪ್ರೇರೇಪಿಸಿದ ಅಷ್ಟು ದೊಡ್ಡ ಸಂಗತಿಯಾದರೂ ಯಾವುದು ? ಸೊ ಕಾಲ್ಡ್ ಪ್ರೀತಿ ??
ಕಾಲೇಜು ಮೆಟ್ಟಿಲು ಹತ್ತಿದ್ದೇ ಒಂದು ದಿಗ್ವಿಜಯ ನನ್ನ ಪಾಲಿಗೆ ! ಭಟ್ರ ಮಗಳು ಬೇರೆ! ಅಷ್ಟು ಸಲೀಸಾಗಿ ಕಾಲೆಜಿಗೆ ಹೋಗೋದು ಅಂದ್ರೆ ಏನು ? ಓದೋದು ಅಂದ್ರೆ ಏನು ? ಓದಿ ಮಾಡಬೆಕಾದ್ದು ಏನು ? ಅದು ಹೇಗೋ ಅಣ್ಣನ ಕಣ್ಣು ಕಾವಲಿನ ಜೊತೆಗೆ ಕಾಲೇಜಿಗೆ ಹೋಗಿಬಂದದ್ದೂ ಆಯಿತು ! ಅವನ ಕಣ್ತಪ್ಪಿಸಿ ಲೆಕ್ಟುರನ ಪ್ರೀತಿಯಲ್ಲಿ ಬಿದ್ದಿದ್ದೂ ಆಯಿತು ! ಎಷ್ಟು ದಿನ ಕಣ್ತಪ್ಪಿಸಲು ಸಾದ್ಯ ? ಮನೆಯವರಿಗೆ ವಿಷಯ ಗೊತ್ತಾಗಿಬಿಟ್ಟಿತ್ತು ! ಚಿಕ್ಕವಳಿದ್ದಾಗಿನಿಂದ ರಾಮಾಯಣ ಮಹಾಭಾರತದ ಕತೆಯನ್ನು ಕೇಳಿದ್ದರೂ ಅದರ ಅನುಭವ ಆದದ್ದೂ ಮಾತ್ರ ಅವತ್ತೇ !! ಅಪ್ಪ, ಅಣ್ಣನ ರುದ್ರವತಾರ! , ಅಮ್ಮನ ಕಣ್ನೀರಿನ ಕಟ್ಟೆಯೊಡೆದು ಊರಿಗೆಲ್ಲ ಸಾಕಾಗುವಷ್ಟು ನೀರು ! ಅವತ್ತು ನಮ್ಮ ಮನೆ ಥೇಟ್ ಯುದ್ದಭೂಮಿ !
ಹೆದರಿಸಿ ಹೇಳಿದ್ದಾಯಿತು , ಹೊಡೆದು ಬಡಿದಿದ್ದೂ ಆಯಿತು , ನೆಂಟರಿಷ್ಟರಿಂದ ಒಂದು ರೌಂಡ್ ಕೌನ್ಸಲಿಂಗೂ ಆಯಿತು , ಉಪವಾಸ ಸತ್ಯಾಗ್ರಹ .., ಉಹ್ಹುಂ .., ನನ್ನದು ಒಂದೇ ಹಠ , ನಾನು ಅವನನ್ನೇ ಮದುವೆಯಾಗೋದು ! "ಆಯಿತಮ್ಮ ನಿನ್ನಿಷ್ಟ " ಅಂದು ಮದುವೆ ನಡೆಸಿಕೊಡಲು ಅದೇನು ಈಗಿನ ಕಾಲವೇ! ? ಎಳೆದು ತಂದಾದರೂ ಮದುವೆಯನ್ನು ಮಾಡಿಬಿಡುತ್ತಿದ್ದ ಕಾಲವದು ! ಗಂಟುಮೂಟೆ ಕಟ್ಟಿಕೊಂಡು ರಾತ್ರಿ 1 ಗಂಟೆಯ ಸುಮಾರಿಗೆ ಥೆಟ್ ಸಿನಿಮ ಶೈಲಿಯಲ್ಲಿ ಮನೆ ಬಿಟ್ಟು ಹೊರಟುಬಿಟ್ಟೆ ! ಹಾಗೆ ಬಂದವಳು ಇವತ್ತಿಗೂ ಹಿಂದಿರುಗಿಲ್ಲ ! ಬಂದ ಒಂದೆರಡು ವರುಷಗಳ ನಂತರ ಅಪ್ಪ ಅಮ್ಮನ ನೆನಪಾಗುತ್ತಿತ್ತು .. 8- 10 ವರುಷಗಳ ನಂತರ ಅವರ ಮರಣದ ಸುದ್ದಿ ಕೇಳಿ .., ಬೇಸರವಾದರೂ ಊರಿನ ನೆನಪು ಮಸುಕಾಗಿ ಕ್ರಮೇಣ ಸೆಳೆತ ಕಡಿಮೆಯಾಗಿತ್ತು .
ಎಲ್ಲ ಬಿಟ್ಟು ಕಟ್ಟಿಕೊಂಡು ಬಂದ ಈತನಾದರೂ ಎಂತವನು ? ಸಭ್ಯ , ಒಳ್ಳೆಯವ , ಸಾಮನ್ಯ ಬುದ್ದಿವಂತಿಕೆ , ಸಾಮಾನ್ಯ ವಿದ್ಯೆ , ಸಾಮನ್ಯ ವ್ಯಕ್ತಿತ್ವ , ಎಲ್ಲದರಲ್ಲೂ 40 -50 ಮಾರ್ಕ್ಸು ಕೊಡಬಹುದಾದ ಸಾಮನ್ಯ ಪ್ಯಾಕೆಜಿನಂತಿದ್ದ .
ಸಾಮಾನ್ಯ ಬದುಕು ಸಾಗುತ್ತಿತ್ತು . 'ಚಂದ್ರನನ್ನು ತೋರಿಸು ' ಅಂದರೆ ರೋಮ್ಯಾಂಟಿಕ್ ಆಗಿ ಉತ್ತರಿಸಲು ಬರದಿದ್ದರೂ ' ನಿಂಗೆ ಕಣ್ಣೂ ಕಾಣೋಲ್ಲವ?' ಎನ್ನುವಷ್ಟು ಒರಟನಾಗಿರಲಿಲ್ಲ ! ಅದು ನಾನು ಕಟ್ಟಿಕೊಂಡು ಬಂದ ಪುಣ್ಯ ಎನಿಸುತ್ತದೆ ನಂಗೆ ! ನಂಗೆ ಆತನ ಬಗ್ಗೆ ಒಂದಷ್ಟೂ ಗೊತ್ತಿರಲ್ಲಿಲ್ಲ ! ಕುಡುಕ ಪಡುಕನೂ , ಕಳ್ಳನೂ, ಸುಳ್ಳನೂ , ಅಷ್ಟೇ ಏಕೆ ಆತನಿಗೆ ಇನ್ನೊಂದು ಮದುವೆಯೇ ಆಗಿದ್ದರೂ ನನಗೆ ತಿಳಿಯುವ ಸಂದರ್ಭ, ಬುದ್ದಿ ಎರಡೂ ಇರಲಿಲ್ಲ ..! ಏನೋ ಪ್ರೀತಿ ಅಂಥದ್ದೇನೋ ಅನಿಸಿತ್ತು , ತುಂಬಾ ಯೋಚಿಸದೆ ಆತನ ಹಿಂದೆ ನಡೆದುಬಂದು ಬಿಟ್ಟಿದ್ದೆ !!
ಆತನ ಬಗ್ಗೆ ಒಂದಷ್ಟೂ ಗೊತ್ತಿರಲ್ಲಿಲ್ಲ ಎನ್ನುವುದು ನಿಜ ., ಏನೂ ಯೋಚಿಸದೆ ಬಂದುಬಿಟ್ಟಿದ್ದು ಎಷ್ಟು ನಿಜ ? ಸಾಕಾಗಿತ್ತು ನಂಗೆ ಆ ಊರು ! ಆ ಬದುಕು ! ಜಾತ್ರೆಯಲ್ಲಿ ಕಂಡ ಬಣ್ಣದ ಲಂಗವನ್ನು ತೆಗೆದುಕೊಳ್ಳಲಾಗದಷ್ಟು ಕಟ್ಟಳೆ, ಸ್ವತಂತ್ರವಾಗಿ ಓಡಾಡಲಾಗದಷ್ಟು ಅಣ್ಣನ ಕಾವಲು , ತಂದದ್ದನ್ನೇ ಉಟ್ಟು ತೊಟ್ಟುಕೊಳ್ಳಬೇಕಾಗಿದ್ದ ಅಭಿರುಚಿಹೀನ ಬದುಕು . ಎಲ್ಲದಕ್ಕಿಂತ ಹೆಚ್ಚಾಗಿ ನಾನು ನೋಡಿದ ನನ್ನ ಅಕ್ಕನ ಬದುಕು .., ಬೆಳೆಗ್ಗೆಯಿಂದ ಸಂಜೆಯ ತನಕ ಸ್ವಲ್ಪವೂ ಬಿಡುವಿಲ್ಲದ ಕತ್ತೆಯ ದುಡಿತ ! ಅವರಿವರ ಮರ್ಜಿಯಲ್ಲೇ ಕಳೆದು ಬಿಟ್ಟ ಜೀವನ ! ಅಂಜಿ ಅಂಜಿ ಆಡುತ್ತಿದ್ದ ಮಾತು , ನಡೆ ! ಎರಡು ಸುಂಬಳ ಸುರಿಯುವ ಮಕ್ಕಳು , ಅವಕ್ಕೇ ಕೈಗಿದ್ದರೆ ಕಾಲಿಗಿಲ್ಲ ,ಕಾಲಿಗಿದ್ದರೆ ಕೈಗಿಲ್ಲ ! ಮತ್ತೆ ಮೂರನೆಯದಕ್ಕೆ ತಯಾರಿ ! ನಂಗೂ ಇದಕ್ಕಿಂತ ಹೆಚ್ಚಿನದು ಇನ್ನೇನೂ ಸಿಗಲು ಸಾದ್ಯ ಇರಲಿಲ್ಲ !
ಮತ್ತೆ ಕಣ್ಣು ಟೀಪಾಯೀಯತ್ತ ಹೊರಳಿತು , ಅಲ್ಲಿದ್ದಿದ್ದು ಅಕ್ಕನ ಮಗಳ ಮದುವೆಯ ಇನ್ವಿಟೇಶನ್ ಕಾರ್ಡ್ . ಲವ್ ಮ್ಯಾರೇಜು ! ಹುಡುಗ ಬೇರೆ ಜಾತಿಯವನು , ಇಬ್ರೂ ಸಾಫ್ಟ್ವೇರ್ ಎನ್ಜನೀರ್ಸ್. ಏನೂ ಗೊತ್ತಿಲ್ಲದೇ ಆಕೆ ಆತನೊಂದಿಗೆ ಬದುಕಿನ ಹೆಜ್ಜೆ ಇಡುವವಳಲ್ಲ; ಆತ ಸಾಮಾನ್ಯ ಪ್ಯಾಕೆಜೂ ಅಲ್ಲ ... ; ಮತ್ತು ಮದುವೆಯನ್ನು ಮನೆಯಲ್ಲೇ ಮಾಡಿಕೊಡುತ್ತಿದ್ದಾರೆ ಅದ್ದೂರಿಯಿಂದ!
ಚೈತ್ರ ಬಿ . ಜಿ . ಕಾನುಗೋಡು
Gud one..
ReplyDeleteThanks..
Deleteolleya baravanige, vishayavannu innondu konadinda noduva prayathna chennagide ...- veena hegde
ReplyDeleteThanks Veena..
Delete